ಉಡುಪಿ: ಕೆಲವೇ ದಿನಗಳಲ್ಲಿ ಉಡುಪಿ ಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೂರ್ಣಪ್ರಜ್ಞ ಕಾಲೇಜು ಹಾಗೂ ರೋಟರಿ ಮಲ್ಪೆ ಸಂಯುಕ್ತ ಆಶ್ರಯದಲ್ಲಿ ಪಿಪಿಸಿಯ ಮಿನಿ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಗಾಂಧೀಜಿ ಅವರ ಅಪೂರ್ವ ಛಾಯಾ ಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಶೌಚಾಲಯ ನಿರ್ಮಾಣದಲ್ಲಿ ಜಿಲ್ಲೆ ಬಹುತೇಕ ಗುರಿ ಸಾಧನೆ ಮಾಡಿದೆ. ಕೆಲವೇ ದಿನಗಳಲ್ಲಿ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀ ಣಾಭಿವೃದ್ಧಿ ಸಚಿವರು ಇದನ್ನು ಅಧೀಕೃತ ವಾಗಿ ಘೋಷಿಸುವರು ಎಂದು ಮಾಹಿತಿ ನೀಡಿದರು. ಸ್ವದೇಶಿ ನೀತಿ, ಸ್ವಚ್ಛ ಭಾರತ, ಅತ್ಯುತ್ತಮ ಶಿಕ್ಷಣ ವ್ಯವಸ್ಥೆ, ಅಸ್ಪೃಶ್ಯತೆ ರಹಿತ ಸಮಾಜ, ಮಹಿಳೆ ಹಾಗೂ ಪುರು ಷರ ಸಮಾನತೆಯ ಕನಸನ್ನು ಗಾಂಧೀಜಿ ಕಂಡಿದ್ದರು. ಅವರನ್ನು ಪಾಲಿಸುವ ಮೂಲಕ ಅವರಿಗೆ ನಮನ ಸಲ್ಲಿಸಬೇಕು ಎಂದು ಹೇಳಿದರು.
‘ಸುಖಿ ಸಮಾಜ ಎಂದರೆ ಅದು ಶ್ರೀಮಂತ ಸಮಾಜ ಎಂದು ಗಾಂಧೀಜಿ ಭಾವಿಸಿರಲಿಲ್ಲ. ನಿರುದ್ಯೋಗ, ಹಸಿವು, ಅನಾರೋಗ್ಯ ಹಾಗೂ ಅಸ್ಪೃಶ್ಯತೆ ಇಲ್ಲದ ಸಮಾಜವೇ ನಿಜವಾದ ಸುಖಿ ಸಮಾಜ ಎಂಬುದು ಅವರ ಭಾವನೆಯಾಗಿತ್ತು. ಅಧಿಕಾರ, ಅಭಿವೃದ್ಧಿ ಹಾಗೂ ಸಂಪತ್ತಿನ ವಿಕೇಂದ್ರೀಕರಣವನ್ನು ಗಾಂಧೀಜಿ ವಿರೋಧಿಸಿದ್ದರು. ಇವುಗಳ ಕೇಂದ್ರೀ ಕರಣದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬುದು ಅವರ ನಂಬಿಕೆಯಾಗಿತ್ತು’ ಎಂದು ವಿಶೇಷ ಉಪನ್ಯಾಸ ನೀಡಿದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ರಾಮದಾಸ್ಪ್ರಭು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ದಿ. ಮಟ್ಟಾರು ವಿಠಲ ಹೆಗ್ಡೆ ಅವರನ್ನು ಸ್ಮರಿಸಲಾಯಿತು. ವಾರ್ತಾಧಿಕಾರಿ ಕೆ. ರೋಹಿಣಿ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಶೆಟ್ಟಿ, ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ರೋಟರಿ ಮಲ್ಪೆ ಅಧ್ಯಕ್ಷ ಕೆ. ಸುದರ್ಶನ ರಾವ್ ಇದ್ದರು. ರೋಟರಿ ವಲಯ ಸೇನಾನಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಜನಾರ್ದನ್ ಕೊಡವೂರು ವಂದಿಸಿದರು.