ಕಡಬ (ಉಪ್ಪಿನಂಗಡಿ): `ಕಾಂಗ್ರೆಸ್ ಪಕ್ಷ ಸೀಟು ಹಂಚಿಕೆಯಲ್ಲಿ ಎಲ್ಲಾ ಧರ್ಮದವರಿಗೆ ಸಮಾನ ಪ್ರಾತಿನಿಧ್ಯ ನೀಡಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮರಿಗೆ 2 ಸೀಟು, ಕ್ರೈಸ್ತರಿಗೆ 1, ಜೈನರಿಗೆ 1 ಮತ್ತು ಹಿಂದೂಗಳಿಗೆ 9 ಸ್ಥಾನಗಳನ್ನು ನೀಡುವ ಮೂಲಕ ಎಲ್ಲ ಜಾತಿ ಧರ್ಮದವರಿಗೂ ಅವಕಾಶ ಕಲ್ಪಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
ಕಡಬದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, `ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿದೆ. ಸಚಿವರು ಜೈಲಿಗೆ ಹೋದ ಇತಿಹಾಸವನ್ನು ನಿರ್ಮಿಸಿದೆ. ನಮಗೆ ಇಂತಹ ಆಡಳಿತ ಬೇಡ. ಸ್ವಚ್ಛ ಪಾರದರ್ಶಕ ಆಡಳಿತ ಬೇಕು. ಇದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು' ಎಂದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಳೆದ 20 ವರ್ಷಗಳಿಂದ ಕುಂಠಿತವಾಗಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಮತ ನೀಡಿ ಆರಿಸಬೇಕೆಂದು ವಿನಂತಿಸಿದರು.
ಕಡಬ ಬ್ಲಾಕ್ ಅಧ್ಯಕ್ಷ ಪಿಪಿ ವರ್ಗೀಸ್ ಮಾತನಾಡಿದರು. ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಎಚ್.ಕೆ.ಇಲ್ಯಾಸ್, ಕೆಪಿ. ತೋಮಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸೊರಕೆ, ಶೀನಪ್ಪ ಗೌಡ ಬೈತಡ್ಕ, ಪ್ರವೀಣ್ ಕುಮಾರ್ ಕೆಡೆಂಜಿ, ರಾಯ್ ಅಬ್ರಹಾಂ, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್ ಗೌಡ, ಪ್ರಧಾನ ಕಾರ್ಯದರ್ಶಿ ಫಝಲ್ ಕೋಡಿಂಬಾಳ, ಕಡಬ ತಾ.ಪಂ. ಸದಸ್ಯೆ ಮೀನಾಕ್ಷಿ ಸುಂದರ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಗಿರೀಶ್ ಬದನೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಇತರರು ಇದ್ದರು. ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ ಗೌಡ ಸ್ವಾಗತಿಸಿ, ಕೆ.ಎಂ.ಹನೀಫ್ ವಂದಿಸಿದರು.