ಕಾರವಾರ: ಅದು 25 ವರ್ಷಗಳ ಹಿಂದಿನ ಮಾತು. ಮಕ್ಕಳೆಲ್ಲ ಅಂದು ಚಿಕ್ಕವರಿದ್ದರು. ಮನೆಯಿಂದ ಹೊರಗೆ ಹೋಗಿ ದುಡಿಯಲು ಕಷ್ಟವೆಂದು ಅರಿತ ಇವರು, ಮನೆಯಲ್ಲೇ ಸಣ್ಣ ಗೃಹೋದ್ಯಮ ಆರಂಭಿಸಿದರು. ಇದೇ ಈಗ ಇವರ ಕುಟುಂಬದ ಜೀವನದ ಆಧಾರವಾಗಿದೆ.
ಕುಮಟಾ ತಾಲ್ಲೂಕಿನ ಅಳ್ವೆಕೋಡಿಯ ಮಂಗಲಾ ವಾಳ್ಕೆ ಈ ಗೃಹೋದ್ಯಮದ ರೂವಾರಿ. ಮಕ್ಕಳಿಬ್ಬರು ಈಗ ಬೆಳೆದು ದುಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೂ ಮನೆಯ ನಿರ್ವಹಣೆಗೆ ಒಂದಷ್ಟು ಸ್ವಂತ ಆದಾಯ ಬೇಕೇ ಬೇಕೆಂದು ಸಿಹಿ ತಿಂಡಿಗಳನ್ನು ತಯಾರಿಸುವ ತಮ್ಮ ಕಾಯಕವನ್ನು ಈಗಲೂ ಮುಂದುವರಿಸಿದ್ದಾರೆ.
ಏನೇನು ಲಭ್ಯ?
ಮಂಗಲಾ ಅವರು ಶಂಕರಪೋಳೆ, ಚಿರೋಟಿ, ರವೆ ಲಾಡುಗಳನ್ನು ತಯಾರಿಸುತ್ತಾರೆ. ಹಿಟ್ಟು ಹದಮಾಡುವುದರಿಂದ ಹಿಡಿದು, ಅದನ್ನು ತಯಾರಿಸಿ, ಪ್ಯಾಕೆಟ್ಗಳನ್ನಾಗಿ ಮಾಡಿ ಮಾರುಕಟ್ಟೆಗೆ ಪೂರೈಕೆ ಮಾಡುವವರೂ ಇವರೇ. ಇವರ ಕೈರುಚಿ, ಮನೆ ತಿಂಡಿಯ ಸ್ವಾದಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ.
‘ಮದುವೆಯ ನಂತರ ಗಾರ್ಮೆಂಟ್ಸ್ಗೆ ಕೆಲಸಕ್ಕೆಂದು ಹೋಗುತ್ತಿದ್ದೆ. ಪತಿ ಕೂಡ ಹೋಟೆ ಲ್ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಕೆಲವು ಸಮಯದ ನಂತರ ಮಕ್ಕಳನ್ನು ನೋಡಿ ಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದಂತಾಗಿತ್ತು. ಇದರಿಂದಾಗಿ ಅನಿವಾರ್ಯವಾಗಿ ಮನೆಯಲ್ಲೇ ಇರುವಂತಾಯಿತು. ಆದರೆ, ಖಾಲಿ ಕುಳಿತರೆ ಆದಾಯವಿಲ್ಲವೆಂದು ಅರಿತು ಸಿಹಿ ತಿಂಡಿ ತಯಾರಿಸುವ ಕಾಯಕ ಪ್ರಾರಂಭಿಸಿದೆ’ ಎನ್ನುತ್ತಾರೆ ಮಂಗಲಾ. ‘ಪ್ರತಿ ತಿಂಗಳು ಒಂದು ಕ್ವಿಂಟಲ್ನಷ್ಟು ಶಂಕರಪೋಳೆ ಹಾಗೂ ಚಿರೋಟಿ ತಯಾರಿಸುತ್ತೇನೆ. 10 ಕೆ.ಜಿ.ಗಳಷ್ಟು ರವೆ ಲಾಡು ನಮ್ಮಲ್ಲಿ ತಯಾರಾಗುತ್ತವೆ. ಕುಮಟಾ ಹಾಗೂ ಹೊನ್ನಾವರದ ಬೇಕರಿಗಳಿಗೆ ಪೂರೈಕೆ ಮಾಡುತ್ತೇನೆ’ ಎಂದು ಅವರು ತಿಳಿಸಿದರು.