ಕುಮಟಾ: ಪಟ್ಟಣದ ಕುಂಭೇಶ್ವರ ದೇವಾಲಯದ ಅರ್ಚಕ ವಿಶ್ವೇಶ್ವರ ಗಣಪತಿ ಭಟ್ಟ (54)ಅವರ ಕೊಲೆ ಪ್ರಕರಣವನ್ನು ಪೊಲೀಸರುಶುಕ್ರವಾರಭೇದಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಆಸ್ತಿ ಕೈ ತಪ್ಪಿ ಹೋಗುತ್ತದೆ ಎನ್ನುವ ಹತಾಶೆಯಲ್ಲಿ ತಮ್ಮ ಸಂಬಂಧಿವಿಶ್ವೇಶ್ವರ ಗಣಪತಿ ಭಟ್ಟ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಕೂಜಳ್ಳಿಯ ಮಂಜುನಾಥ ಈಶ್ವರ ಹೆಗಡೆ (50) ಹಾಗೂ ಶಿರಸಿ ತಾಲ್ಲೂಕಿನ ಸೋಮನಳ್ಳಿಯ ಅವಿವಾಹಿತ ಹರೀಶ ಹೆಗಡೆ (30)ಬಂಧಿತರು.
‘ಕೊಲೆಯಾದವಿಶ್ವೇಶ್ವರ ಭಟ್ಟ ಅವರ ಅಜ್ಜ ಬರೆದಿಟ್ಟ ಆಸ್ತಿ ಉಯಿಲಿನ ಪ್ರಕಾರ ಎಲ್ಲ ಆಸ್ತಿ ವಿಶ್ವೇಶ್ವರ ಭಟ್ಟ ಅವರಿಗೇ ಸೇರುತ್ತದೆ.ಇದರಿಂದಹತಾಶರಾದ ಅವರ ಚಿಕ್ಕಪ್ಪ ನಾಗಪ್ಪ ಗಣಪು ಭಟ್ಟ ಅವರ ದತ್ತು ಪುತ್ರ ಮಂಜುನಾಥ ಹೆಗಡೆ ಕೊಲೆ ಸಂಚು ರೂಪಿಸಿದ. ಇದಕ್ಕೆ ಶಿರಸಿಯ ತನ್ನ ಸಂಬಂಧಿ ಹರೀಶ ಹೆಗಡೆ ಎನ್ನುವವನ ಸಹಾಯ ಪಡೆದ’ ಎಂದು ಪೊಲೀಸರು ಹೇಳಿದ್ದಾರೆ.
ವಿಶ್ವೇಶ್ವರ ಭಟ್ಟ ಅವರಿಗೆ ಮಂಗಳವಾರ ದೂರವಾಣಿ ಕರೆ ಮಾಡಿದ ಆರೋಪಿಗಳು, ಮೂರೂರಿನಲ್ಲಿ ಪೂಜಾ ಕಾರ್ಯ ಇದೆ ಎಂದುಬೈಕ್ನಲ್ಲಿ ಕೂಜಳ್ಳಿಗೆ ಕರೆಸಿಕೊಂಡರು. ಅಲ್ಲಿ ಕಾಯಿ ಸುಲಿಯುವ ಸೂಲಿಗೆ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದರು. ಬಳಿಕ ಅಡಿಕೆ ತೋಟದಲ್ಲಿಬಾವಿಯಂಥ ಹೊಂಡಅಗೆದುಸುಮಾರು12 ಅಡಿ ಆಳದಲ್ಲಿ ಶವವನ್ನು ನಿಂತ ಭಂಗಿಯಲ್ಲೇ ಹೂತರು.
ಆರೋಪಿಗಳ ಪತ್ತೆಗೆ ಕುಮಟಾ ಸಿಪಿಐ, ಹೊನ್ನಾವರ ಸಿಪಿಐ, ಅಂಕೋಲಾ ಪಿಎಸ್ಐ ಹಾಗೂ ಶಿರಸಿ ನ್ಯೂ ಮಾರ್ಕೆಟ್ ಠಾಣೆ ಪಿಎಸ್ಐ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಡಾ.ಗೋಪಾಲ ಬ್ಯಾಕೋಡ ತಿಳಿಸಿದರು.
ಭಟ್ಕಳ ಡಿವೈಎಸ್ಪಿ ವ್ಯಾಲೆಂಟೀನ್ ಡಿಸೋಜಾ, ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಸ್ಥಳದಲ್ಲಿ ಹಾಜರಿದ್ದರು. ಕುಮಟಾ ಸಿಪಿಐ ಸಂತೋಷ ಶೆಟ್ಟಿ ತನಿಖೆ ಮುಂದುವರಿಸಿದ್ದಾರೆ.