ಭಟ್ಕಳ: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ 15 ಕೋಣಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ಉಡುಪಿ ಜಿಲ್ಲೆಯ ಕಡೆಗೆ ಸಾಗಿಸುತ್ತಿದ್ದಾಗ ಹಿಂದು ಸಂಘಟನೆಗಳ ಸದಸ್ಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೈಲಹೊಂಗಲ ನಿವಾಸಿಗಳಾದ ಆನಂದ ಮಾಗಪ್ಪ ಮರೋಳ್ಳಿ, ಮಲ್ಲನಗೌಡ ರಾಮನಗೌಡ ಮರಿಕೆಂಚ, ಸಿದ್ದಪ್ಪ ಶಿವಪ್ಪ ಎಂದು ಗುರುತಿಸಲಾಗಿದೆ.
ಇವರು ಬೈಲಹೊಂಗಲ ಕಡೆಯಿಂದ ಕಳವು ಮಾಡಿದ 15 ಕೋಣಗಳನ್ನು ಉಡುಪಿಯ ಜಿಲ್ಲೆಯ ಕಡೆಯ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಖಚಿತಮಾಹಿತಿ ಮೇರೆಗೆ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಕೋಣಗಳನ್ನು ಸಾಗಿಸುತ್ತಿದ್ದ ವಾಹನ ವನ್ನು ಹಿಡಿದು ಆರೋಪಿಗಳ ಸಮೇತ ನಗರಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ರಾಘವೇಂದ್ರ ಆರ್. ನಾಯ್ಕ ದೂರು ನೀಡಿದ್ದಾರೆ. ಪಿಎಸ್ಐ ಅಣ್ಣಪ್ಪ ಮೊಗೇರ ಪ್ರಕರಣದ ತನಿಖೆ ನಡೆಸಿದ್ದಾರೆ.