ಭಟ್ಕಳ: ತಾಲ್ಲೂಕಿನ ಶಿರಾಲಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿನಿಯೊಬ್ಬಳು ಬಸ್ ಏರುವ ಮೊದಲೇ ಚಾಲಕ ಬಸ್ ಚಲಾಯಿಸಿದ್ದರಿಂದ ವಿದ್ಯಾರ್ಥಿನಿಯು ಬಸ್ನಿಂದ ಬಿದ್ದು ಗಾಯಗೊಂಡಿದ್ದಾಳೆ.
ಬೈಂದೂರು ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ, ತಾಲ್ಲೂಕಿನ ಮೂಢ ಶಿರಾಲಿಯ ನಿವಾಸಿ ಚಿತ್ರಾ ಮಂಜುನಾಥ ನಾಯ್ಕ,
ಶಿರಾಲಿಯಲ್ಲಿ ಜನ ಸ್ನೇಹಿ ಬಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿಕೊಂಡು ಭಟ್ಕಳ ಕಡೆಗೆ ತೆರಳಿದ್ದಾರೆ. ವಿದ್ಯಾರ್ಥಿನಿ ಬಸ್ ಕೆಳಗಿನಿಂದ ಬಿದ್ದ ಪರಿಣಾಮ ಎರಡು ಮೊಣಕಾಲು ಹಾಗೂ ಗಲ್ಲಕ್ಕೆ ಗಾಯವಾಗಿದೆ. ತಕ್ಷಣ ಆಕೆಯನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಕುಪಿತರಾದ ವಿದ್ಯಾರ್ಥಿನಿಯ ಪಾಲಕರು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಸ್ಥಳಕ್ಕೆ ಕರೆಯಿಸುವಂತೆ ಡಿಪೊ ಮ್ಯಾನೇಜರನ್ನು ಆಗ್ರಹಿಸಿದರು.
ಬಸ್ ಕುಮಟಾಗೆ ತೆರಳಿದ್ದರಿಂದ ಬಸ್ ಮರಳಿ ಭಟ್ಕಳಕ್ಕೆ ಬಂದ ಮೇಲೆ ವಿಚಾರಣೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ಅವರು ಭರವಸೆ ನೀಡಿದರು.
ಸ್ಥಳದಲ್ಲಿದ್ದ ಪೊಲೀಸರು ಪಾಲಕರು ಹಾಗೂ ಸಾರ್ವಜನಿಕನ್ನು ಸಮಾಧಾನಿಸಿ ಅಲ್ಲಿಂದ ಕಳುಹಿಸಿದರು.