ಪ್ರಜಾವಾಣಿ ವಾರ್ತೆ
ಕಾರವಾರ: ಅಕ್ರಮವಾಗಿ ಕೋಟ್ಯಂತರ ಮೊತ್ತದ ನಗದು ದಾಸ್ತಾನಿಟ್ಟುಕೊಂಡಿದ್ದ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಕಾಲ್ನಡಿಗೆ ಮೂಲಕ ಗಾಂಧಿ ಉದ್ಯಾನಕ್ಕೆ ಮುಖಂಡರು, ಕಾರ್ಯಕರ್ತರು ತೆರಳಿದರು. ಗಾಂಧಿ ಪ್ರತಿಮೆ ಎದುರು ಕುಳಿತು ಪ್ರತಿಭಟನೆ ನಡೆಸಿ ಭ್ರಷ್ಟ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಆಗ್ರಹಿಸಿದರು. ನಗರದ ಮುಖ್ಯ ರಸ್ತೆಯಲ್ಲಿಯೂ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸುಭಾಷ ವೃತ್ತದಲ್ಲಿ ಸೇರಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಧೀರಜ್ ಸಾಹು ಎಂಬ ಸಂಸದ ಕಾಂಗ್ರೆಸ್ ಸಾವಿಗೆ ದಾರಿ ಮಾಡಿಕೊಟ್ಟಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಬೋಫೋರ್ಸ್, 2ಜಿ ಹಗರಣ ಸೇರಿದಂತೆ ನೀರು, ನೆಲ, ಗಾಳಿಯಲ್ಲಿಯೂ ಭ್ರಷ್ಟಾಚಾರ ನಡೆದಿತ್ತು. ಕಾಂಗ್ರೆಸ್ ಹಣ ಹಂಚಿ ಮತ ಖರೀದಿಸುವ ಷಡ್ಯಂತ್ರ ನಡೆಸುತ್ತಿದೆ’ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ‘ಭ್ರಷ್ಟ ಹಣದ ಮೂಲಕ ಚುನಾವಣೆ ಗೆಲ್ಲುತ್ತಿದ್ದ ಕಾಂಗ್ರೆಸ್ ಈಗ ಪಂಚರಾಜ್ಯ ಚುನಾವಣೆಯ ಸೋಲಿನ ಬಳಿಕ ದೃತಿಗೆಟ್ಟಿದೆ. ಲೋಕಸಭೆ ಚುನಾವಣೆಗೆ ಹಣ ಒಗ್ಗೂಡಿಸಲಾಗುತ್ತಿದೆ’ ಎಂದರು.
ಮುಖಂಡ ಸುನೀಲ ಹೆಗಡೆ, ‘ಕಾಂಗ್ರೆಸ್ ರಕ್ತದಲ್ಲಿ ಭ್ರಷ್ಟಾಚಾರ ತುಂಬಿಕೊಂಡಿದೆ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ‘ರಾಹುಲ್ ಗಾಂಧಿ ಅವರ ಆಪ್ತ ಸಂಸದನ ಮನೆಯಲ್ಲಿ ದೊಡ್ಡ ಮೊತ್ತದ ನಗದು ಪತ್ತೆಯಾಗಿದ್ದು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಬಣ್ಣ ಬಹಿರಂಗವಾಗಿದೆ’ ಎಂದರು.
ಪ್ರಮುಖರಾದ ಚಂದ್ರು ಎಸಳೆ, ಗೋವಿಂದ ನಾಯ್ಕ, ನಾಗರಾಜ ನಾಯಕ, ಎಂ.ಜಿ.ಭಟ್, ಎನ್.ಎಸ್.ಹೆಗಡೆ, ನಯನಾ ನೀಲಾವರ ಇದ್ದರು.
ಸುಪ್ರೀಂ ಆದೇಶ ಸ್ವಾಗತಾರ್ಹ
‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್ ನಿರ್ಣಯ ಸ್ವಾಗತಾರ್ಹ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪ್ರತಿಭಟನೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು ‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆರ್ಟಿಕಲ್ 370ಯನ್ನು ಸಂಸತ್ ಒಪ್ಪಿಗೆಯೊಂದಿಗೆ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ದೇಶ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ನಾಯಕರು ಕೆಲವು ಸಂಘಟನೆಯವರು ನ್ಯಾಯಾಲಯದಲ್ಲಿ ನಿರ್ಣಯ ಪ್ರಶ್ನಿಸಿದ್ದರು. ಕೋರ್ಟ್ ಸೂಕ್ತ ನಿರ್ಣಯ ಕೈಗೊಂಡಿದೆ’ ಎಂದರು. ‘ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಮಾತ್ರ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಬಳಸಿಕೊಂಡಿದೆ. ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು ಯೋಜನೆ ಅರ್ಹರನ್ನು ತಲುಪುವಂತೆ ನೋಡಿಕೊಂಡಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.