ಶಿರಸಿ: ಶಿರಸಿ ಹೊರವಲಯದ ಗಣೇಶನಗರ ಅಂಗನವಾಡಿ ಕೇಂದ್ರ 6ರ ಬಳಿ ಗೌರಿ ನಾಯ್ಕ ಒಬ್ಬಂಡಿಯಾಗಿ ತೋಡುತ್ತಿದ್ದ ಬಾವಿಯಲ್ಲಿ ಬುಧವಾರ ಗಂಗಾವತರಣವಾಗಿದೆ.
ಜ.30ರಿಂದ ನಿರಂತರವಾಗಿ ಗೌರಿ ನಾಯ್ಕ ಅವರು ಒಂಟಿಯಾಗಿ ಬಾವಿ ತೋಡುವ ಕಾರ್ಯದಲ್ಲಿ ನಿರತರಾಗಿದ್ದರು. ಈವರೆಗೆ 45 ಅಡಿ ಆಳ ತೋಡಿರುವ ಅವರು ಇನ್ನೂ ನಾಲ್ಕೈದು ಅಡಿಗಳಷ್ಟು ಆಳ ತೋಡಲಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಕೊನೆಯ ಮೂರು ದಿನ ಇಬ್ಬರು ಕೂಲಿಗಳನ್ನು ಬಾವಿಯಿಂದ ಮಣ್ಣು ಎತ್ತಲು ಬಳಸಿಕೊಂಡಿದ್ದರು.
ಬಾವಿಯಲ್ಲಿ ನೀರು ಚಿಮ್ಮುತ್ತಿದ್ದಂತೆ ಗೌರಿ ನಾಯ್ಕ ಸೇರಿದಂತೆ ಗ್ರಾಮಸ್ಥರು ಬಾವಿಗೆ ಪೂಜೆ ಸಲ್ಲಿಸಿದರು. ಬಾವಿಯಲ್ಲಿ ಚಿಮ್ಮಿದ ನೀರಿನಿಂದ ಅವರು ತಲೆಯ ಮೇಲೆ ನೀರು ಹಾಕಿಕೊಂಡರು. ನಂತರ ಸ್ಥಳಿಕರು ಸಿಹಿ ಹಂಚಿ ಸಂಭ್ರಮಿಸಿದರು.
'ಸಾಕಷ್ಟು ಪ್ರಯತ್ನದ ನಂತರ ಬಾವಿಯಲ್ಲಿ ನೀರು ಬಂದಿದೆ. ಇಂದು ಮನಸ್ಸಿಗೆ ನೆಮ್ಮದಿ ಸಿಕ್ಕಿದೆ' ಎನ್ನುತ್ತಾರೆ ಗೌರಿ ನಾಯ್ಕ.
ಅಂಗನವಾಡಿ ಮಕ್ಕಳಿಗೆ ನೀರಿನ ದಾಹ ನೀಗಿಸಲು ಸ್ವತಃ ಬಾವಿ ತೋಡಲು ಗೌರಿ ನಾಯ್ಕ ಮುಂದಾಗಿದ್ದರು. ಬಾವಿ ತೋಡಲು ಅನುಮತಿಯಿಲ್ಲ ಎಂಬ ಕಾರಣಕ್ಕೆ ಇಲಾಖೆಗಳ ನಿರಂತರ ಒತ್ತಡದ ನಡುವೆ ಅಂತಿಮವಾಗಿ ಬಾವಿ ಕಾರ್ಯ ಮುಗಿಸಿದ್ದಾರೆ. ಗೌರಿಯವರು ಏಕಾಂಗಿಯಾಗಿ ತೋಡಿದ ಮೂರನೇ ಬಾವಿ ಇದಾಗಿದೆ.