ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರಿಕಾಂಬೆಯ ಪುನರ್ ಪ್ರತಿಷ್ಠೆ ಸಂಪನ್ನ

Published 10 ಏಪ್ರಿಲ್ 2024, 13:37 IST
Last Updated 10 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯುಗಾದಿ ಹಬ್ಬದಂದು ನಡೆಯಿತು. ಪ್ರತಿಷ್ಠಾ ಕಾರ್ಯ ನೆರವೇರಿಸಿದ ನಂತರ ದೇವಿಗೆ ಪೂಜೆ, ಸೇವೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.

ಕಳೆದ ಹದಿನೈದು ದಿನಗಳಿಂದ ದೇವಾಲಯದಲ್ಲಿ ಮಾರಿಕಾಂಬೆಯ ದರ್ಶನ, ಪೂಜೆ ಅವಕಾಶ ಇರಲಿಲ್ಲ. ಮಾರ್ಚ್‌ 19ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ನಡೆದ ದ್ವೈವಾರ್ಷಿಕ ಜಾತ್ರೆಯ ಮುಕ್ತಾಯದಲ್ಲಿ ಪಾರಂಪರಿಕವಾಗಿ ದೇವಿ ಮೂರ್ತಿಯನ್ನು ಸಾಂಕೇತಿಕವಾಗಿ ವಿಸರ್ಜನೆ ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಜಾತ್ರೆಯ ಪ್ರಾರಂಭದಲ್ಲಿ ವಿವಾಹ ಮಂಗಲೋತ್ಸವ ನಡೆದು ಸರ್ವಮಂಗಳೆಯಾಗಿ ದೇವಿಯ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜೆ ಹರಕೆ ಸೇವೆ ಸಲ್ಲಿಸಿ ಜಾತ್ರಾ ಮುಕ್ತಾಯದಲ್ಲಿ ಅಮಂಗಳವಾಗಿ ಮರಳುವ ಸಂಪ್ರದಾಯವಿದೆ. ಹೀಗಾಗಿ ಸಂಪ್ರದಾಯದಂತೆ, ಮಾರಿಕಾಂಬಾ ಜಾತ್ರೆಯ ಕೊನೆಯ ದಿನ ದೇವಿಯ ವಿಸರ್ಜನೆ ನಡೆದ ಮೇಲೆ ದೇವಾಲಯದ ಬಾಗಿಲು ಮುಚ್ಚಿರುತ್ತದೆ.

ಪುನರ್ ಪ್ರತಿಷ್ಠೆ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಪೂಜಾ ಕಾರ್ಯಕ್ರಮ 10 ಗಂಟೆಯವರೆಗೆ ನಡೆಯಿತು. ಧರ್ಮದರ್ಶಿ ಮಂಡಳಿ ಸದಸ್ಯರು, ಬಾಬುದಾರರು, ಭಕ್ತರು ಪಾಲ್ಗೊಂಡರು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ  ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಬಾಬುದಾರ ಪ್ರಮುಖ ಜಗದೀಶ ಗೌಡ, ಅಜಯ ನಾಡಿಗ್ ಇತರರು ಇದ್ದರು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT