ಕಾರವಾರ: ತಾಲ್ಲೂಕಿನ ಕದ್ರಾ ಸಮೀಪದ ‘ವಜ್ರ’ ಜಲಪಾತ ಮೈದುಂಬಿಕೊಂಡಿದ್ದು, ಸುಮಾರು 70 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿನಿಂದ ಹಾಲ್ನೊರೆಯಂತೆ ನೀರು ಹರಿಯುತ್ತಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಈ ಜಲಪಾತವು, ಕದ್ರಾದಿಂದ ಜೊಯಿಡಾಕ್ಕೆ ಹೋಗುವ ಹೆದ್ದಾರಿಯ ಮಗ್ಗುಲಲ್ಲೇ ಇದೆ.ಬೆಟ್ಟದ ತುದಿಯಿಂದಮೂರು ಕವಲುಗಳಾಗಿ ಕೆಳಗಿಳಿಯುವ ನೀರು, ಬಂಡೆಗಳ ನಡುವೆ ಬಳುಕುತ್ತ ಬಂದು ಒಂದೆಡೆ ಸೇರಿದಾಗ ನಯನ ಮನೋಹರವಾಗಿ ಕಾಣಿಸುತ್ತದೆ.
ರಸ್ತೆಯಂಚಿನಲ್ಲೇ ಈ ಜಲಧಾರೆ ಇರುವ ಕಾರಣ ಎಲ್ಲ ಪ್ರವಾಸಿಗರು ಕನಿಷ್ಠ ಅರ್ಧ ಗಂಟೆ ಇಲ್ಲಿ ಜಲಕ್ರೀಡೆಯಾಡಿ,ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸುತ್ತಾರೆ.
ಸೌಲಭ್ಯದ ಕೊರತೆ:ಇದು ಘಟ್ಟಪ್ರದೇಶದಲ್ಲಿದ್ದು, ದಟ್ಟಾರಣ್ಯದ ನಡುವೆಯಿದೆ. ಇಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳಿಲ್ಲ ಎಂದು ಬೆಳಗಾವಿಯ ಪ್ರವಾಸಿ ಜಯಶ್ರೀ ಬೇಸರ ವ್ಯಕ್ತಪಡಿಸುತ್ತಾರೆ.
‘ದಿನವೂ ನೂರಾರು ಪ್ರವಾಸಿಗರು ಇಲ್ಲಿ ಬಂದು ಸ್ನಾನ ಮಾಡುತ್ತಾರೆ. ಮಹಿಳೆಯರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಒಂದು ಕೊಠಡಿ ನಿರ್ಮಾಣವಾದರೆ ಸಾಕಷ್ಟು ಅನುಕೂಲವಾಗುತ್ತದೆ. ಅದಕ್ಕೆ ಕಾಡು ಕಡಿದು ದೊಡ್ಡದಾದ ಸ್ಥಳ ನಿರ್ಮಿಸಿಕೊಳ್ಳಬೇಕಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಆಲೋಚಿಸಬೇಕು’ ಎಂಬುದು ಅವರು ಮನವಿಯಾಗಿದೆ.
ಇದು ಕೇವಲ ಮಳೆಗಾಲದಲ್ಲಿ ಮಾತ್ರ ಇರುವ ಜಲಪಾತವಾದ ಕಾರಣ ತಾತ್ಕಾಲಿಕವಾಗಿ ಫೈಬರ್ ಶೆಡ್ ನಿರ್ಮಿಸಿದರೂ ಸಾಕು. ನೀರಿನ ಹರಿವು ಕಡಿಮೆಯಾದ ಬಳಿಕ ಅದನ್ನು ಕಳಚಿ ಕೊಂಡೊಯ್ದು ಮುಂದಿನ ಋತುವಿಗೆ ಮತ್ತೆ ಅಳವಡಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರ ಜತೆಗಿದ್ದ ಭವಾನಿ.
ವಾರಾಂತ್ಯದಲ್ಲಿ ಇಲ್ಲಿ ನೂರಾರು ಜನರು ಸೇರಿರುತ್ತಾರೆ.ಕೆಲವರು ಕಾರುಗಳನ್ನು ಅಡ್ಡಾದಿಡ್ಡಿಯಾಗಿನಿಲ್ಲಿಸಿ ಹೆದ್ದಾರಿಯಲ್ಲಿ ಇತರ ವಾಹನಗಳ ಓಡಾಟಕ್ಕೆ ಅಡಚಣೆ ಮಾಡುತ್ತಾರೆ. ವಾಹನ ನಿಲುಗಡೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಪೊಲೀಸ್ ಇಲಾಖೆ ಹೆಚ್ಚುವರಿಯಾಗಿ ಒಂದಿಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ ಸೂಕ್ತ ಎನ್ನುವುದು ಪ್ರವಾಸಿಗರ ಒತ್ತಾಯವಾಗಿದೆ.