ಭಟ್ಕಳ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಹಲವು ಮನೆಗಳಿಗೆ ನೀರು ನುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪುರಸಭೆ ಹಾಗೂ ಜಾಲಿ ಪಟ್ಟಣ ವ್ಯಾಪ್ತಿಯಲ್ಲಿ ಸಮರ್ಪಕ ಚರಂಡಿ ಹೂಳೆತ್ತದ ಕಾರಣ ಮಣ್ಕುಳಿ, ಹನುಮಾನ ನಗರ, ಕೊಟೇಶ್ವರ ರಸ್ತೆ ಹಾಗೂ ಗುಳ್ಮೀ ಆಶ್ರಯ ಕಾಲೊನಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಉಂಟಾಗಿದೆ.
ಪ್ರಥಮ ಮಳೆಯಲ್ಲಿಯೇ ಪಟ್ಟಣದ ಶಂಸುದ್ದೀನ್ ಸರ್ಕಲ ಜಲವೃತವಾಗಿದ್ದು, ಮಳೆ ನೀರಿನಲ್ಲಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು. ಮಳೆಗೆ ತಾಲ್ಲೂಕಿನಲ್ಲಿ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ರಾತ್ರಿ ಪೂರ್ತಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.
ತಾಲ್ಲೂಕಿನಲ್ಲಿ ಬುಧವಾರವೂ ಬಾರಿ ಮಳೆಗಾಳಿಯ ಮುನ್ಸೂಚನೆ ಇರುವ ಕಾರಣ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಮುನ್ಸೂಚನೆ ನೀಡಲಾಗಿದೆ.