ಭಟ್ಕಳ: ‘ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಸಿಬ್ಬಂದಿ ಆಹಾರ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಸದಾ ಜಾಗೃತ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ’ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಹೇಳಿದರು.
ಅವರು ತಾಲ್ಲೂಕು ಪಂಚಾಯ್ತಿ, ಸಭಾಂಗಣದಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಅಡುಗೆ ಸಿಬ್ಬಂದಿಗೆ ಈಚೆಗೆ ನಡೆದ ತರಬೇತಿ ಕಾರ್ಯಗಾರ ಉದ್ಟಾಟಿಸಿ ಮಾತನಾಡಿದರು.
‘ಅಡುಗೆ ಸಿಬ್ಬಂದಿ ಕಾಲಕಾಲಕ್ಕೆ ಪುನರ್ ಮನನ ಅಗತ್ಯವಿದ್ದು, ಅವರು ಕೆಲಸದಲ್ಲಿ ನಿರ್ವಹಿಸಬೇಕಾದ ಪ್ರಮುಖ ಅಂಶಗಳ ಕುರಿತು ಆಗಾಗ ಇಂತಹ ಕಾರ್ಯಗಾರಗಳ ಮೂಲಕ ಅರಿತು ಕೊಳ್ಳಬೇಕಾದುದು ಅಗತ್ಯ ಅತೀ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕಾಯಕ ನಿರ್ವಹಿಸುವ ಇವರು ಇಲಾಖೆಯ ಆಸ್ತಿಗಳು’ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಉದಯ ಬೋರಕರ್, ತಾ.ಪಂ ವ್ಯವಸ್ಥಾಪಕ ಲತಾ ನಾಯ್ಕ, ಸಂಪನ್ಮೂಲ ವ್ಯಕ್ತಿ ಎಸ್.ಆರ್.ಮೇಸ್ತ ಮಾತನಾಡಿದರು. ಅಕ್ಷರ ದಾಸೋಹ ವಿಭಾಗದ ಕೃಷ್ಣ ಗೊಂಡ, ತರಬೇತಿ ಸಂಸ್ಥೆಯ ಸ್ವಾತಿ ನಾಯ್ಕ ರವರು ತರಬೇತಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.