ಕುಮಟಾ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 17 ರ ಬದಿಯ ಹೊಸದಾಗಿ ನಿರ್ಮಾಣಗೊಂಡ ಕಟ್ಟಡವೊಂದರಲ್ಲಿ ಯಾರೋ ಅಪರಿಚಿತರು ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಾರ್ಜಜನಿಕರಿಗೆ ಊಟ, ತಿಂಡಿ ಹಾಕಿಸಿದ ಬಗ್ಗೆ ಕುಮಟಾದಲ್ಲಿ ಕಾರ್ಯ ನಿರ್ವಹಿಸುವ ಚುನಾವಣಾ ಸಂಚಾರಿ ವಿಚಕ್ಷಣ ದಳ ( ಫ್ಲೈಯಿಂಗ್ ಸ್ಕಾಡ್) ಪ್ರಕರಣ ದಾಖಲಿಸಿದೆ.
ಏ.15ರಂದು ಕುಮಟಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಯಾದ ನಂತರ ರಾಷ್ಟ್ರೀಯ ಹೆದ್ದಾರಿ-17ರ ಬದಿ ಹೊಸತಾಗಿ ನಿರ್ಮಾಣಗೊಂಡ ಮಹಾಲಕ್ಷ್ಮಿ ಹೆಸರಿನ ಕಟ್ಟಡದಲ್ಲಿ ಯಾರೋ ಅಪರಿಚಿತರು ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಾರ್ಜಜನಿಕರಿಗೆ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಕುಮಟಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಂಚಾರಿ ವಿಚಕ್ಷಣಾ ದಳದ ಮುಖ್ಯಸ್ಥ ಕೆ.ಎನ್. ಶ್ರೀನಿವಾಸ ಅವರು ದಾಳಿ ನಡೆಸಿದಾಗ ಅಲ್ಲಿದ್ದ ಜನರು ಓಡಿ ಹೋಗಿ ಪರಾರಿಯಾಗಿದ್ದಾರೆ.
ಆ ಸ್ಥಳದಲ್ಲಿ 2 ರೂಪಾಯಿ ಬೆಲೆ ಬಾಳುವ 100 ಪ್ಲಾಸ್ಟಿಕ್ ಲೋಟ ಸಿಕ್ಕಿದ್ದು, ಯಾವುದೇ ರಾಜಕೀಯ ಪಕ್ಷದ ವಾರಸುದಾರರು ಹಾಗೂ ಚಿನ್ಹೆ ಲಭ್ಯವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ನ್ಯಾಯಾಲಯದ ಅನುಮತಿ ಕೋರಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಉಪವಿಬಾಭಾಗಾಧಿಕಾರಿ ತಿಳಿಸಿದ್ದಾರೆ.