ಶಿರಸಿ: ತಾಲ್ಲೂಕಿನ ದೇವರ ಹೊಳೆ ಸಮೀಪದ ಕಾಡಿನಲ್ಲಿ ನಡೆದ ಸುಸ್ಥಿರ ಜೇನು ಕೊಯ್ಲು ಶಿಬಿರದಲ್ಲಿ ವನವಾಸಿ ಜೇನು ಸಂಗ್ರಾಹಕ ರಾಮಾ ಮರಾಠೆ ವಿಶೇಷ ಧಿರಿಸು ಹಾಕಿಕೊಂಡು ಹಗಲಿನಲ್ಲೂ ಹೆಜ್ಜೇನು ಕೊಯ್ಯುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಮಹಿಳೆಯರಿಗೆ ಜೇನು ಪೆಟ್ಟಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು. ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ಮಾತನಾಡಿ, ‘ಜೇನುತುಪ್ಪಕ್ಕೆ ಉತ್ತಮ ಮಾರುಕಟ್ಟೆ ಇದೆ’ ಎಂದರು.
ಜೇನು ಕೃಷಿಕರಾದ ರವಿ ಬೊಮ್ಮನಳ್ಳಿ, ಎನ್.ಜಿ.ಭಟ್ಟ, ತೋಟಗಾರಿಕಾ ಇಲಾಖೆ ಅಧಿಕಾರಿ ಅಣ್ಣಪ್ಪ ನಾಯ್ಕ, ಅಧ್ಯಯನಕಾರ ನರಸಿಂಹ ಹೆಗಡೆ ವಾನಳ್ಳಿ ಮಾಹಿತಿ ನೀಡಿದರು. ವಿಶ್ವನಾಥ ಹೆಗಡೆ ಬುಗಡಿಮನೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರಾದ ಮಹಾಬಲೇಶ್ವರ ಹೆಗಡೆ ಕೇರಿಮನೆ, ವಿಶ್ವನಾಥ ಹೆಗಡೆ ದೇವರಕೇರಿ, ಶ್ರೀಪಾದ ಉಪಸ್ಥಿತರಿದ್ದರು. ಶ್ರೀಕಾಂತ ಅಗಸಾಲ ವಂದಿಸಿದರು.
ಕಾಡಿನ ಜೇನು ರಕ್ಷಣೆಗೆ, ಜೇನು ಸಾಕಣೆಗೆ ರೈತರನ್ನು ತೊಡಗಿಸಲು ಶಿಬಿರ ಉಪಯುಕ್ತವಾಯಿತು. ಯಲ್ಲಾಪುರ ಹಾಗೂ ಸಾಗರಗಳಲ್ಲಿ ಜೇನು ತರಬೇತಿಯನ್ನು ಜನವರಿ, ಫೆಬ್ರುವರಿ ತಿಂಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ವೃಕ್ಷ ಲಕ್ಷ ಆಂದೋಲನ ತಿಳಿಸಿತು.