ಭಟ್ಕಳ: ನೆರೆಯ ಕುಂದಾಪುರ ತಾಲ್ಲೂಕಿನಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗಡಿಯವರೆಗೆ ನಡೆಯಬೇಕಾಗಿದ್ದ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದ್ದು, ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ನೆರೆಯ ಉಡುಪಿ ಮತ್ತು ದ.ಕ.ಜಿಲ್ಲೆಯಲ್ಲಿ ನಡೆಸುತ್ತಿರುವ 4ನೇ ಹಂತದ ಚತುಷ್ಪಥ ಹೆದ್ದಾರಿ ಕಾಮಗಾರಿ ಕಳೆದ ಮೂರು ವರ್ಷದಿಂದ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಎಲ್ಲ ಅಧಿಕಾರಿಗಳು ಮತ್ತು ರಾಜಕಾರಣಿಗಳು ನೀಡುತ್ತಿದ್ದಾರೆ. ಆದರೆ ಇದುವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿಲ್ಲ ಎಂಬುದು ಸ್ಥಳೀಯರ ಆರೋಪ.
ಭಟ್ಕಳ ಸೇರಿದಂತೆ ಉ.ಕ. ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ಯೋಜನೆಗಾಗಿ ಸಮೀಕ್ಷೆ, ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಯಾವುದೇ ಕಾರ್ಯವೂ ನಡೆದಿಲ್ಲ. ಅಲ್ಲದೇ ಚತುಷ್ಪಥ ರಸ್ತೆ ಕಾಮಗಾರಿ ಟೆಂಡರ್ ಪಡೆಯಲು ಏ. 30 ಕೊನೆಯ ದಿನವಾಗಿತ್ತು. ಈ ಅವಧಿಯೊಳಗೆ ಮುಂಬೈ ಮೂಲದ ಐ.ಆರ್.ಸಿ. ಸಂಸ್ಥೆ ಮಾತ್ರ ಟೆಂಡರ್ ಸಲ್ಲಿಸಿದೆ. ಹೀಗಾಗಿ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದೆ.
ಕಿರಿದಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿವೆ. ಕಳೆದ 10 ದಿನಗಳಲ್ಲಿ 15ಕ್ಕೂ ಜನರು ಮೃತಪಟ್ಟು, ಹಲವರು ಗಾಯಗೊಂಡ ಘಟನೆಗಳು ಸಂಭವಿಸಿವೆ ಎಂದೂ ಗ್ರಾಮಸ್ಥರು ಹೇಳಿದ್ದಾರೆ.