ಹೊಸಪೇಟೆ (ವಿಜಯನಗರ): ‘ಕೇವಲ ಅಧಿಕಾರದ ಉದ್ದೇಶದೊಂದಿಗೆ ಹಲವು ಗ್ಯಾರಂಟಿಗಳನ್ನು ಪ್ರಕಟಿಸಿದ ಕಾಂಗ್ರೆಸ್ನ ತಂತ್ರದಿಂದ ಯಾರೂ ಮೈಮರೆಯಬಾರದು. ಇಂತಹ ಗ್ಯಾರಂಟಿಗಳಿಂದ ಆರ್ಥಿಕ ಸ್ಥಿತಿ ನಾಶವಾಗುತ್ತದೆ ಎಂಬ ಸ್ಪಷ್ಟ ಅರಿವು ಇರುವ ಕಾರಣಕ್ಕೇ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಘೋಷಣೆ ಮಾಡಿಲ್ಲ’ ಎಂದು ಮಾಜಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಮದಕರಿ ನಾಯಕ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರೊಂದಿಗೆ ಮದಕರಿ ನಾಯಕ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದ ಬಳಿಕ ಪ್ರಚಾರಕ್ಕೆ ತೆರಳುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಇಂಡಿಯಾ’ ಗುಂಪಿನಲ್ಲಿ 20ಕ್ಕೂ ಅಧಿಕ ಪಕ್ಷಗಳಿವೆ. ಅದುವೇ ಕೌರವ ಬಣ. ಅದರ ಬಗ್ಗೆ ಜನರಿಗೆ ಸರಿಯಾದ ಮನವರಿಕೆ ಆಗಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಭರವಸೆ. ಹೀಗಾಗಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸ ಇದೆ’ ಎಂದು ಹೇಳಿದರು.
ಬಿ.ಶ್ರೀರಾಮುಲು ಮಾತನಾಡಿ, ‘ಈ ಬಾರಿ ನರೇಂದ್ರ ಮೋದಿ ಅವರ ಕೈಬಲಪಡಿಸಲು ಮತದಾರರು ತೀರ್ಮಾನಿಸಿರುವುದು ಸ್ಪಷ್ಟವಾಗಿದೆ. ಎರಡೂ ಜಿಲ್ಲೆಗಳಲ್ಲಿ ಭೇಟಿಯಾದ ಹಲವಾರು ಸಮುದಾಯಗಳ ಮುಖಂಡರು ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ’ ಎಂದರು.
‘ಆನಂದ್ ಸಿಂಗ್ ಅವರು ಹಲವು ಅಭಿವೃದ್ಧಿ ಕೆಲಸ ಮಾಡಿದವರು. ಅವರ ಬೆಂಬಲದೊಂದಿಗೆ ಈ ಬಾರಿ ಪ್ರಚಾರ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ಕೆಲಸಗಳ ಕುರಿತು ಜನರಿಗೆ ಮನವರಿಕೆ ಆಗಿದೆ. ಹೀಗಾಗಿ ಈ ಬಾರಿ ಮತದಾರರು ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದರು.