ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರ ಮೈಲಾರದಲ್ಲಿ ಗುರುವಾರ ರಾತ್ರಿ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಿಯರ ಕಲ್ಯಾಣ ಮಹೋತ್ಸವ ನೆರವೇರಿತು.
ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಅರ್ಚಕ ಪ್ರಮೋದ ಭಟ್ ಹಾಗೂ ಬಾಬುದಾರರು ಕಲ್ಯಾಣೋತ್ಸವದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕಂಕಣ ವಿತರಿಸಲಾಯಿತು.
ಅವಿವಾಹಿತರು ಸ್ವಾಮಿಯಲ್ಲಿ ಪ್ರಾರ್ಥಿಸಿ ಕಂಕಣ ಧರಿಸಿಕೊಂಡರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ. ಕಲ್ಯಾಣ ಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳ ಭಕ್ತರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ರಾತ್ರಿ 8 ಗಂಟೆಗೆ ಮೈಲಾರಲಿಂಗೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ನವ ವಿವಾಹತ ಜೋಡಿಗಳು ಸುಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಶಾಂತಮ್ಮ, ಸುಕ್ಷೇತ್ರದ ಬಾಬುದಾರರು, ಗ್ರಾಮಸ್ಥರು ಇದ್ದರು.