ಹೊಸಪೇಟೆ: ಹಂಪಿಯ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀರಘುನಂದನ ತೀರ್ಥರ ಮೂಲ ಬೃಂದಾವನ ಸನ್ನಿಧಿಯಲ್ಲಿ ರಘುನಂದನ ತೀರ್ಥರ ಮಧ್ಯಾರಾಧನೆ ಮಂಗಳವಾರ ಶ್ರದ್ಧಾ ಭಕ್ತಿಯೊಂದಿಗೆ ನಡೆಯಿತು.
ಬೆಳಿಗ್ಗೆ ಶ್ರೀರಘುನಂದನ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲಪಂಚಾಮೃಭಿಷೇಕ, ಅರ್ಚನೆ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ರಜತ, ರೇಷ್ಮೆ ಅಲಂಕಾರ ಮಾಡಲಾಗಿತ್ತು.
ಪಂಡಿತ್ ಗುರುಪ್ರಸಾದ್ ಆಚಾರ್ಯ ಮಾತನಾಡಿ, ‘ಶ್ರೀರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಯತಿಗಳಾದ ಶ್ರೀರಘುನಂದನ ತೀರ್ಥರ ಕೊಡುಗೆ ಅಪಾರ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮೂಲರಾಮದೇವರ ಪ್ರತಿಮೆಯನ್ನು ಪುನಃ ತಂದುಕೊಟ್ಟ ಮಹನೀಯರು ಇವರು. ಅಧ್ಯಾತ್ಮ ಕ್ಷೇತ್ರಕ್ಕೆ ಗುರುಗಳ ಕೊಡುಗೆ ಅಪಾರ’ ಎಂದರು.
ದ್ವಾರಕಾನಾಥ ಆಚಾರ್ಯ, ಸಿರುಗುಪ್ಪಿ ಕೃಷ್ಣಾಚಾರ್ಯ, ರಮೇಶ್ ಆಚಾರ್ಯ ವಿಶೇಷ ಉಪನ್ಯಾಸ ನೀಡಿದರು. ಭಜನೆ, ಅಷ್ಟೋತ್ತರ ಪಾರಾಯಣ ನಡೆಯಿತು.
ಮಠದ ಸುಧೀಂದ್ರ ಆಚಾರ್ಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ವಿಚಾರಣಕರ್ತ ಗುರುರಾಜ್ ದಿಗ್ಗಾವಿ, ಗುನ್ನಾಳ್ ವೆಂಕಟೇಶ, ಶ್ರೀನಿವಾಸ ಪುರಾಣಿಕ, ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಅನಂತ ಪದ್ಮನಾಭ ಇದ್ದರು.