ವಿಜಯಪುರ: ‘ಸಚಿವ ದಿನೇಶ ಗುಂಡೂರಾವ್ ಅವರು ಬಿಜೆಪಿ ಪಕ್ಷ, ಕಾರ್ಯಕರ್ತರು ಮತ್ತು ಆರ್ಎಸ್ಎಸ್ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವುದು, ಹೇಳಿಕೆ ನೀಡುವುದು ಮಾಡುತ್ತಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ವಿಜಯಪುರದ ಆಶ್ರಮ ಬಡಾವಣೆಯ ನಿವಾಸಿ ಪ್ರಕಾಶ ಚವ್ಹಾಣ ಎಂಬುವವರು ಸೋಮವಾರ ಗಾಂಧಿ ಚೌಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ದಿನೇಶ್ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ’ ಎಂಬ ಶಾಸಕ ಯತ್ನಾಳ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಗುಂಡೂರಾವ್ ಪತ್ನಿ ಟಬು ರಾವ್ ದೂರು ದಾಖಲಿಸಿದ ಬೆನ್ನಲ್ಲೇ, ಶಾಸಕ ಯತ್ನಾಳ ಕಡೆಯವರು ಪ್ರತಿದೂರು ನೀಡಿದ್ದಾರೆ.