ವಿಜಯಪುರ: ತಾಲ್ಲೂಕಿನ ನಾಗಠಾಣ ಮತ್ತು ಅಲಿಯಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಸೋಮವಾರ ಚಾಲನೆ ನೀಡಿದರು.
ಗ್ರಾಮೀಣ ಜನರಿಗೆ ಬೇಸಿಗೆಕಾಲದಲ್ಲಿ ನಿರಂತರವಾಗಿ ಮೂರು ತಿಂಗಳು ನರೇಗಾ ಯೋಜನೆಯಡಿ ಕೆಲಸ ನೀಡಲಾಗುವುದು. ವಿಶೇಷ ವರ್ಗಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಂಗವಿಕಲರು ಹಿರಿಯ ನಾಗರಿಕರು ಹಾಗೂ ತೃತೀಯ ಲಿಂಗಿಗಳಿಗೆ ಯೋಜನೆಯಡಿ ಉದ್ಯೋಗ ಚೀಟಿ ಹಾಗೂ ಮೊದಲ ಆದ್ಯತೆಯ ಮೇರೆಗೆ ಕೆಲಸ ನೀಡಲಾಗುವುದು ಎಂದು ಶಿಂಧೆ ತಿಳಿಸಿದರು.
60 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ನರೇಗಾ ಕೆಲಸದಲ್ಲಿ ಶೇ 50 ರಷ್ಟು ರಿಯಾಯಿತಿ ಇರುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅಲಿಯಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲರನ್ನು ಮಾತನಾಡಿಸಿ, ನರೇಗಾ ಯೋಜನೆಯ ಬಗ್ಗೆ ಅವರು ಹೊಂದಿರುವ ಅಭಿಪ್ರಾಯಗಳನ್ನು ಕುರಿತು ಚರ್ಚಿಸಿದರು.
ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರ ಹಾಜರಾತಿ ಮತ್ತು ಉದ್ಯೋಗ ಚೀಟಿಗಳನ್ನು ಅವರು ಪರಿಶೀಲಿಸಿದರು.
ವಿಜಯಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಎಚ್, ಸಹಾಯಕ ನಿರ್ದೇಶಕ ಕಾಸಿಮಸಾಬ ಮಸಳಿ ಉಪಸ್ಥಿತರಿದ್ದರು.