ಸಿಂದಗಿ: ಸಿಂದಗಿ ಜಿಲ್ಲೆ ರಚನೆ ಮಾಡಲು ಒತ್ತಾಯಿಸಿ ಆರಂಭಗೊಂಡ ಹೋರಾಟದ ಹಿನ್ನೆಲೆಯಲ್ಲಿ ಜ.11 ರ ನಂತರ ಬೆಂಗಳೂರಿಗೆ ನಿಯೋಗವೊಂದು ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿಯ ಬಸವಮಂಟಪದಲ್ಲಿ ಭಾನುವಾರ ಸಂಜೆ ನಡೆದ ಸಿಂದಗಿ ಜಿಲ್ಲೆ ಬೇಡಿಕೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಸಾಹಿತಿಗಳು, ಸಂಘಟನೆ ಪ್ರಮುಖರನ್ನೊಳಗೊಂಡ 10 ಜನರ ನಿಯೋಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವ, ಸರ್ಕಾರದ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಿಂದಗಿ ಜಿಲ್ಲೆಯನ್ನಾಗಿ ರಚನೆ ಮಾಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಂದಗಿ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸಿಂದಗಿಯನ್ನು ನಗರಸಭೆಯನ್ನಾಗಿ ಮಾರ್ಪಾಡು ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ . ಬ್ರಿಟಿಷರ ಕಾಲದಲ್ಲಿ ಸಮೀಕ್ಷೆ ಮಾಡಲಾಗಿದ್ದ ಶೇಡಬಾಳ-ಸಿಂದಗಿ ಶಹಾಬಾದ ರೇಲ್ವೆ ಮಾರ್ಗ ಆರಂಭಗೊಳ್ಳುವ ದಿಸೆಯಲ್ಲಿ ಹೋರಾಟ ಕೈಗೊಳ್ಳುವ ಕುರಿತು ಮಾತನಾಡಿದರು.
ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿ, ರೇಲ್ವೆ ಮಾರ್ಗ ತೀರ ಅಗತ್ಯವಾಗಿದ್ದು ಈ ಬಗ್ಗೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಸಿಂದಗಿ ಜಿಲ್ಲೆ ರಚನೆ ಕುರಿತು ಪಕ್ಷಾತೀತವಾಗಿ ಮತಕ್ಷೇತ್ರದ ಶಾಸಕರು, ಮಾಜಿ ಶಾಸಕರು ಒಂದುಗೂಡಿ ಹೋರಾಟಕ್ಕೆ ಸಜ್ಜಾಗಿರುವುದು ವಿಶೇಷವಾಗಿದೆ. ಜಿಲ್ಲೆಯಾಗುವ ಕಾಲ ಸನ್ನಿಹಿತವಾಗಿದೆ. ಹೋರಾಟ ನಿರಂತರವಾಗಿರಬೇಕು’ ಎಂದು ವಿವಿಧ ಸಂಘಟನೆಗಳಿಗೆ ಮನವಿ ಮಾಡಿದರು.
ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕದ ಪ್ರಮುಖ ದಸ್ತಗೀರ ಮುಲ್ಲಾ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಜೆಡಿಎಸ್ ಪ್ರಮುಖ ಪ್ರಕಾಶ ಹಿರೇಕುರುಬರ, ಕರವೇ ರಾಜ್ಯ ಘಟಕದ ಸಂಚಾಲಕ ಸಂತೋಷ ಪಾಟೀಲ ಡಂಬಳ, ರಾಷ್ಟ್ರೀಯ ಬಸವದಳದ ಶಿವಾನಂದ ಕಲಬುರ್ಗಿ, ದಸಂಸ ಪ್ರಮುಖ ವೈ.ಸಿ.ಮಯೂರ, ರಣದೀರ ಪಡೆ ಸಂಚಾಲಕ ಸಂತೋಷ ಮಣಿಗಿರಿ ಸೇರಿದಂತೆ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.