ಆಲಮೇಲ: 2006-07ನೇ ಸಾಲಿನಲ್ಲಿ ಇಂಡಿ ಸಿಂದಗಿ ಭಾಗದ ಸಾವಿರಾರು ರೈತರು ಬೆಳೆದ ಕಬ್ಬು ಕಟಾವು ಆಗದೇ ಹಾನಿಯಾಗಿದ್ದು, ಅದರ ಪರಿಹಾರವನ್ನು ಸರಕಾರ ಅರ್ಧದಷ್ಟನ್ನು ನೀಡಿತ್ತು. ಉಳಿದ ಬಾಕಿ ರೂ. 15 ಕೋಟಿಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದು, ಈ ಬಾಕಿ ಮೊತ್ತವು ಜನವರಿ ಮೊದಲ ವಾರದಲ್ಲಿ ರೈತರ ಕೈ ಸೇರಲಿದೆ ಎಂದು ಶಾಸಕ ರಮೇಶ ಭೂಸನೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂಡಿ ಶಾಸಕ ಡಾ.ಸಾರ್ವಭೌಮ ಬಗಲಿ, ವಿಠ್ಠಲ ಕಟಕಧೋಂಡ, ಹಾಗೂ ತಾವು ಮಾಡಿಕೊಂಡ ಮನವಿಗೆ ಸಕಾರಾತ್ಮಕ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ತಿಂಗಳಾಂತ್ಯಕ್ಕೆ ಹಣ ಕೈ ಸೇರುವಂತೆ ಮಾಡುವು ದಾಗಿ ಸದನದಲ್ಲಿ ಹೇಳಿದ್ದಾರೆ. ರೈತರ ಬಹು ದಿನಗಳ ಬೇಡಿಕೆ ಈಡೇರಿ ಅಂದು ಕಬ್ಬು ಬೆಳೆದು ಕಷ್ಟ ಸೋಸಿದ ರೈತರ ಮೊಗದಲ್ಲಿ ಈಗ ಸಂತಸ ಚಿಮ್ಮಿದೆ ಎಂದರು.
ಬೀದಿಗಿಳಿದು ಹೋರಾಟ
ರೈತರು ಈ ಭಾಗದಲ್ಲಿ ಸಾಕಷ್ಟು ಕಬ್ಬು ಬೆಳೆದಿದ್ದು, ಸೂಕ್ತ ಬೆಲೆಯನ್ನು ಕಾರ್ಖಾನೆಗಳ ಮಾಲೀಕರು ನೀಡುತ್ತಿಲ್ಲ. ಇಲ್ಲಿನ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ, ನಾದ ಬಳಿ ಜಮಖಂಡಿ ಶುಗರ್ಸ,ಪಕ್ಕದ ಅಫ್ಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗಳು ಸೂಕ್ತ ಬೆಲೆಯನ್ನು ನೀಡದೇ ರೈತರನ್ನು ವಂಚಿಸುತ್ತಿದ್ದಾರೆ.