ಯಾಳಗಿ (ಕೆಂಭಾವಿ): ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ವಾಂತಿ, ಭೇದಿಯಾಗಿ 10 ಮಂದಿ ಭಾನುವಾರ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿದಾಖಲಾಗಿದ್ದಾರೆ.
‘ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರಿಗೆ ಇಲ್ಲಿಯೇ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯವಿಲ್ಲ’ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ ತಿಳಿಸಿದರು.
‘ಯಾಳಗಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಸೌಕರ್ಯ ಕೊರತೆ ಎದುರಿಸುತ್ತಿದೆ. ವೈದ್ಯರು ಸಕಾಲಕ್ಕೆ ಬರುವುದಿಲ್ಲ. ಹೀಗಾಗಿ ರೋಗಿಗಳನ್ನು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಕರವೇ ಮುಖಂಡ ರಾಮನಗೌಡ ಹೊಸಮನಿ ತಿಳಿಸಿದರು.
‘ಗ್ರಾಮದ ಹಲವೆಡೆ ಪೂರೈಕೆಯಾಗುವ ನಲ್ಲಿ ನೀರು ಕಲುಷಿತವಾಗಿದ್ದು, ಅದನ್ನು ಕುಡಿದು ನಾಲ್ಕು ದಿನಗಳಿಂದಜನರ ಆರೋಗ್ಯ ಹದಗೆಟ್ಟಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆದರೆ, ಇದನ್ನು ಅಲ್ಲಗಳೆದಿರುವ ಪಂಚಾಯಿತಿ ಅಧಿಕಾರಿಗಳು, ‘ಗ್ರಾಮದಲ್ಲಿ ಅಕ್ರಮವಾಗಿ ಮೀನು ಮಾರಲಾಗುತ್ತಿದ್ದು, ತಿನ್ನಲು ಯೋಗ್ಯವಲ್ಲದ ಮೀನುಗಳನ್ನು ಸೇವಿಸಿ ಗ್ರಾಮಸ್ಥರ ಆರೋಗ್ಯ ಹಾಳಾಗಿದೆ’ ಎಂದು ತಿಳಿಸಿದ್ದಾರೆ.