ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಬರದ ಭೀಕರತೆ ತಟ್ಟುತ್ತಿದೆ. ಬಿತ್ತಿದ ಬೆಳೆಗಳು ಬಂದಿಲ್ಲ. ಅಳುದಿಳಿದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವುದು ಸಾಮಾನ್ಯವಾಗಿದೆ.
ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಬಾರದ ಕಾರಣ ಹೆಸರು, ಉದ್ದು, ಆಲಸಂದಿ ಬೆಳೆಗಳನ್ನು ಬಿತ್ತನೆ ಮಾಡಲು ಆಗಿಲ್ಲ. ಇದು ಮುಂಗಾರು ಹಂಗಾಮಿನ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಸಾಲ ಮಾಡಿ, ಜಮೀನು ಗುತ್ತಿಗೆ ಪಡೆದು ಬಿತ್ತಿದ ಬೆಳೆಗಳು ಕೈಗೆ ಬಾರದಿದ್ದರಿಂದ ರೈತರನ್ನು ಚಿಂತೆಗೀಡು ಮಾಡಿದೆ. ಪ್ರತಿ ವರ್ಷವೂ ಹತ್ತಿ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದ್ದರೂ ಬೆಲೆ ಮಾತ್ರ ಇಳಿಕೆಯತ್ತ ಸಾಗಿದೆ.
ಮಳೆ ಸಮಪರ್ಕವಾಗಿ ಆಗದ ಕಾರಣ ದನಕರುಗಳ ಮೇವಿಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಾಡಯಿಸಲಿದೆ. ಬಿತ್ತಿದ ಬೆಳೆಗಳಿಗೆ ತೇವಾಂಶ ಕೊರತೆಯಿಂದ ಒಣಗಿ ಹೋಗಿವೆ. ಕಾಯಿ, ಮೊಗ್ಗು ಉದುರು ಹೋಗಿವೆ.
ಬಯಲು ಪ್ರದೇಶಗಳಲ್ಲಿ ಸಂಕಟ
ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ನೀರಾವರಿ ಇದ್ದೂ ಹಲವೆಡೆ ಮಳೆಯಾಶ್ರಿತ ಪ್ರದೇಶವಿದೆ. ಇದರಿಂದ ಮುಂದಿನ ದಿನಗಳಲ್ಲಿ ಬರದ ಭೀಕರತೆ ತೀವ್ರವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ, ಜಿಲ್ಲಾಡಳಿತ ಯುದ್ದದೋಪಾದಿಯಲ್ಲಿ ಬರ ಕಾಮಗಾರಿಗಳನ್ನು ನಿರ್ವಹಣೆ ಮಾಡಬೇಕು ಎನ್ನುವುದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.
‘ಜಿಲ್ಲೆಗೆ ₹9 ಕೋಟಿ ಬಿಡುಗಡೆ’
ಜಿಲ್ಲೆಯ ಬರ ನಿರ್ವಹಣೆಗಾಗಿ ಸರ್ಕಾರದಿಂದ ₹9 ಕೋಟಿ ಮಂಜೂರು ಮಾಡಲಾಗಿದೆ. ಈ ಸಂಬಂಧ ಎಲ್ಲ ತಾಲ್ಲೂಕುಗಳಲ್ಲಿ ಸಭೆ ಮಾಡಿ ಯಾವ ಕಾಮಗಾರಿ ಮಾಡಬೇಕು ಎಂದು ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಶಹಾಪುರದಲ್ಲಿ ಸಭೆ ನಡೆಸಲಾಗಿದೆ. ಉಳಿದ ಕಡೆ ಸಭೆ ಮಾಡಲಾಗುವುದು. ನ.27ರಂದು ಶಹಾಪುರದಲ್ಲಿ ಮೂರನೇ ಜನತಾ ದರ್ಶನಾ ನಡೆಯಲಿದ್ದು ಅಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಲಾಗುವುದು ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ ‘ಅನ್ನದಾತರ ಸಾಲ ಮನ್ನಾ ಮಾಡಲಿ’ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಗಾಗಿ ಪರಿತಪಿಸುವಂತಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಶಾಶ್ವತ ಪರಿಹಾರ ನೀಡಬೇಕು. ರೈತರ ನಿಜವಾದ ಬವಣೆ ಮುಂದಿನ ದಿನಗಳಲ್ಲಿ ಶುರುವಾಗುತ್ತದೆ. ಡಿಸಿಸಿ ಬ್ಯಾಂಕ್ ನಿಷ್ಕ್ರಿಯಿತೆಯಿಂದ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಹಲವರ ಸಾಲಗಳು ನವೀಕರಣ ಆಗಿಲ್ಲ. ಒಣ ಬೇಸಾಯಗಾರರು ಪರಿತಪಿಸುವಂತಾಗಿದೆ ಯಲ್ಲಯ್ಯ ನಾಯಕ ವನದುರ್ಗ ರೈತ ಮುಖಂಡ
‘ಬರ ಪರಿಹಾರ ಕಾಮಗಾರಿ ಆರಂಭವಾಗಲಿ’
‘ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು ಬರ ಪರಿಹಾರ ಕಾಮಗಾರಿಗಳು ಆರಂಭವಾಗಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಗುಳೆ ತೆರಳುವುದು ಸಾಮಾನ್ಯವಾಗಿದೆ. ಬರಪೀಡಿತ ಪ್ರದೇಶದಲ್ಲಿ ಕಾಮಗಾರಿ ಆರಂಭವಾದರೆ ಜನರು ಸ್ವಗ್ರಾಮದಲ್ಲಿ ಉಳಿಯಲು ಸಾಧ್ಯ. ಹೀಗಾಗಿ ಸರ್ಕಾರದ ಗ್ಯಾರಂಟಿ ಯೋಜನೆಯಂತೆ ಬರ ನಿರ್ವಹಣೆ ಕಾಮಗಾರಿಗಳು ಆರಂಭವಾಗಬೇಕು. ಇದನ್ನು ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಬರ ಪರಿಹಾರಕ್ಕೆ ತಮ್ಮ ಪಕ್ಷಗಳ ಮೇಲೆ ಒತ್ತಡ ಹಾಕಬೇಕು. ಬರ ಪರಿಹಾರ ಕಾಮಗಾರಿಗಳು ಆರಂಭವಾದರೆ ಜನ ಜಿಲ್ಲೆಯಲ್ಲಿ ಉಳಿಯುತ್ತಾರೆ. ಇಲ್ಲದಿದ್ದರೆ ಗುಳೆ ಹೋಗುವುದು ತಪ್ಪಲ್ಲ’ ಎಂಬುದು ಜಿಲ್ಲೆ ಜನರ ಅಂಬೋಣ.
ಹಿಂಗಾರು ಹಂಗಾಮಿಗೆ ನೀರಿಲ್ಲ
ಕೃಷ್ಣಾಅಚ್ಚು ಕಟ್ಟು ಪ್ರದೇಶದಲ್ಲಿ ನೀರಾವರಿ ಬೆಳೆಗಳಾದ ಭತ್ತ ಕಬ್ಬು ಬಾಳೆ ಬೆಳೆಗಳು ಬಿಟ್ಟು ಉಳಿದ ಬೆಳೆಗಳಿಗೆ ಕಾಲುವೆ ನೀರು ಹರಿಸಲು ಸರ್ಕಾರದ ಆದೇಶವಿದೆ. ಹಿಂಗಾರು ಹಂಗಾಮಿಗೆ ಕಾಲುವೆ ನೀರು ಹರಿಸುವುದಿಲ್ಲ ಎಂದು ಈಗಾಗಲೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದರಿಂದ ಈಗಿರುವ ಬೆಳೆಗಳನ್ನು ಉಳಿಸಿಕೊಳ್ಳುವದೇ ದುಸ್ತರವಾಗಿರುವಾಗ ಮುಂದಿನ ಬೆಳೆಗಳಿಗೆ ಆಲೋಚನೆ ಮಾಡುವುದು ರೈತರಿಗೆ ನಿಲುಕದ ಪ್ರಶ್ನೆಯಾಗಿದೆ. ಡಿಸೆಂಬರ್ 4ರವರೆಗೆ ನೀರು ಹರಿಸಿ ಮುಂದೆ ಯಾವುದೇ ಕಾರಣಕ್ಕೂ ಹೆಚ್ಚಿನ ನೀರು ಹರಿಸಬಾರದು ಎಂಬ ಸುತ್ತೋಲೆ ಮೆಣಿಸಿನಕಾಯಿ ಬೆಳೆಯುವ ರೈತರಿಗೆ ಮರಣ ಶಾಸನವಾಗಿದೆ ಎಂದು ಬೆಳೆಗಾರರ ಹೇಳುವ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.