ಯಾದಗಿರಿ: ಆತ್ಮ ವಿಶ್ವಾಸ ಎನ್ನುವುದು ಪ್ರತಿಯೊಬ್ಬ ಮಾನವನಲ್ಲಿರುವಂಥ ವಿಶೇಷವಾದ ಶಕ್ತಿ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಬೇಗನೆ ಗುರುತಿಸಿ, ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ಅಗಾಧ ಯಶಸ್ವಿ ಸಾಧಿಸಬಲ್ಲರು ಎಂದು ಉಪನ್ಯಾಸಕ ಸಿ.ಆರ್.ಕಂಬಾರ ಅಭಿಪ್ರಾಯಿಸಿದರು.
ವಡಗೇರಾ ತಾಲ್ಲೂಕಿನ ಗುಂಡುಗುರ್ತಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ, ಆದಿ ಸೊಸೈಟಿ ಮತ್ತು ಜನ ಕಲ್ಯಾಣ ಟ್ರಸ್ಟ್ಗಳ ಸಂಯುಕ್ತಾಶ್ರಗಳ ವತಿಯಿಂದ ನಡೆದ ಒಂದು ದಿನದ ವ್ಯಕ್ತಿತ್ವ ವಿಕಸನದ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ 'ಆತ್ಮ ವಿಶ್ವಾಸ ರೂಪಿಸಿಕೊಳ್ಳುವ ಬಗೆ ಹೇಗೆ' ಎಂಬ ವಿಷಯದ ಕುರಿತು ಮಾತನಾಡಿ ಆತ್ಮ ವಿಶ್ವಾಸ: ಸ್ವಂತ ನಂಬಿಕೆ ಮತ್ತು ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೋನಯ್ಯ ಎಂ ಕಲಾಲ್ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗೆ ಇಳಿಯಬೇಕು. ಸತತ ಅಧ್ಯಯನ, ನಿರಂತರ ಪ್ರಯತ್ನ ಮತ್ತು ಸೂಕ್ತ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ತಿಪ್ಪಣ್ಣ ನಾಗೂರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶ್ರಮಿಸುತ್ತಿರುವ ಈ ರೀತಿಯ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹ ನೀಡಬೇಕು. ಆ ಮೂಲಕ ಸಮಾಜದ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ 2023 ನೇ ಸಾಲಿನಲ್ಲಿ ಆನ್ಲೈನ್ ಮೂಲಕ ನಡೆಸಿದ ಎರಡನೇ ವರ್ಷದ ರಸಪ್ರಶ್ನೆಯಲ್ಲಿ ಭಾಗವಹಿಸಿದ 26 ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪಂಚಾಂಗಮ್ ಸುಧಾ, ಭೀಮರಾಯ ಮತ್ತು ಎಸ್ಡಿಎಂಸಿ ಅಧ್ಯಕ್ಷ ರಾಜೂಗೌಡ ದಳಪತಿ ಸೇರಿದಂತೆ ನೂರಾರು ಮಕ್ಕಳು ಉಪಸ್ಥಿತರಿದ್ದರು.