ಶಹಾಪುರ/ವಡಗೇರಾ: ‘ಯಪ್ಪಾ ತಾಯಿ ಕೃಷ್ಣೆಯ ನೀರಿನ ಭರವಸೆಯ ಮ್ಯಾಲ್ ಜೀವನ ಸಾಗಿಸುತ್ತಿದ್ದವರಿಗೆ ಇದೇ ನೀರು ಬದುಕು ಕಸಿದುಕೊಂಡಿದೆ. ಎಷ್ಟೊಂದು ಭರವಸೆಯನ್ನು ಹೊತ್ತು ಜೀವನ ಮುನ್ನಡೆಸಬೇಕು? ಹ್ವಾದ ವರ್ಷ ಹಾಳಾಗಿ ಮನೆ ಸೇರಿದ್ದಿವಿ. ಇನ್ನಾದರೂ ನಮ್ಮನ್ನು ಬದುಕಲು ಬಿಡಿ ತಾಯಿ...’
ಕೃಷ್ಣಾ ನದಿ ಪ್ರವಾಹದ ಸಂಕಷ್ಟವನ್ನು ಎದುರಿಸುತ್ತಲೇ ಆತಂಕದ ದಿನಗಳನ್ನು ಕಳೆಯುತ್ತಿರುವ ಅಲ್ಲಿನ ಜನತೆಯ ಮತುಗಳು ಇವು.
ಕಳೆದ ವರ್ಷ ಸಾಕಷ್ಟು ಹೈರಾಣಗೊಂಡು ಹೊರ ಬಂದಿದ್ದೆವು. ಈಗ ಬಿತ್ತನೆ ಮಾಡಿದ ಹತ್ತಿ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆ ಕೊಚ್ಚಿ ಹೋಗುವ ಆತಂಕ ಮನೆ ಮಾಡಿದೆ. ಬಿತ್ತನೆಗೆ ಹಾಕಿದ ರಸಗೊಬ್ಬರ, ವಿದ್ಯುತ್ ಮೋಟರ್, ಟಿ.ಸಿ ಮತ್ತೆ ಎಲ್ಲಿ ಸುಟ್ಟು ಹೋಗುತ್ತವೆ ಎಂಬ ಭೀತಿ ಆವರಿಸಿದೆ ಎಂದು ಗೌಡೂರ ಗ್ರಾಮದ ದೇವಿಂದ್ರ ತಿಳಿಸಿದರು.
ವಡಗೇರಾ ತಾಲ್ಲೂಕಿನ ಯಕ್ಷಿಂತಿ, ಗೌಡೂರ, ತುಮಕೂರ, ಗೊಂದೆನೂರ ಹಲವಾರು ಹಳ್ಳಿಗಳಿಗೆ ಪ್ರವಾಹದ ನಷ್ಟದ ಹಣ ಬಂದಿಲ್ಲ. ತಾಂತ್ರಿಕದ ನೆಪ ಮುಂದಿಟ್ಟುಕೊಂಡು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಮಗೂ ಒಂದು ತಾಳ್ಮೆ ಇರುತ್ತದೆ, ಎಷ್ಟೊಂದು ಪರೀಕ್ಷೆ ಮಾಡುತ್ತೀರಿ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗೂಗಲ್ ಬ್ಯಾರೇಜ್: ಗೂಗಲ್ ಬ್ರಿಜ್ ಕಂ ಬ್ಯಾರೇಜ್ನ ಗೇಟ್ ಎತ್ತರಿಸಲು ನಿಗಮದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತುಕ್ಕು ಹಿಡಿದ ಗೇಟ್ ಸರಿಪಡಿಸಲು ಕ್ರೇನ್ ಬಳಸಿಕೊಂಡು ಎತ್ತರಿಸುವ ಕಾರ್ಯ ಸಾಗಿದೆ. ಗೇಟ್ ಎತ್ತರಿಸುವುದರಿಂದ ನೀರಿನ ಪ್ರವಾಹ ಕಡಿಮೆಯಾಗಿ ಗ್ರಾಮಗಳಿಗೆ ಹಿನ್ನೀರಿನ ಸಮಸ್ಯೆ ಆಗುವುದಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂಅಧಿಕಾರಿಗಳು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ ಎಂದು ಐಕೂರ ಗ್ರಾಮದ ರೈತ ಮುಖಂಡ ತಿಪ್ಪಣ್ಣ ದೊರೆ ಆರೋಪಿಸಿದರು.