ಯಾದಗಿರಿ: ತಾನು ಪ್ರೀತಿ ಮಾಡಿದವಳು ಸಿಗದಿದ್ದಾಗ ಹೊಂಚು ಹಾಕಿ ಇಬ್ಬರನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡವನ್ನು ಮಾ.20ರಂದು ವಿಧಿಸಿ ಆದೇಶಿಸಿದ್ದಾರೆ.
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಬಸವರಾಜ ಭೀಮರಾಯ ಪೂಜಾರಿ ಜೀವಾವಧಿ ಶಿಕ್ಷೆ ಒಳಗಾದ ವ್ಯಕ್ತಿ.
ಬಸವರಾಜ ಎನ್ನುವವರು ರಸ್ತಾಪುರ ಗ್ರಾಮದ ಭಾರತಿ ಎಂಬುವವರನ್ನು ಪ್ರೀತಿಸುತ್ತಿದ್ದ. ಭಾರತಿ ಕುಟುಂಬದವರು ಇದನ್ನು ಲೆಕ್ಕಿಸದೆ ಗುರುನಾಥರಡ್ಡಿ ಎನ್ನುವವರ ಜೊತೆ ವಿವಾಹ ಮಾಡಿದ್ದರು. ಗುರುನಾಥರಡ್ಡಿಗೆ ಬಸವರಾಜ ಕೊಲೆ ಬೆದರಿಕೆ ಹಾಕಿದ್ದರು.
2014 ಮೇ 29 ರಂದು ರಸ್ತಾಪುರ ಗ್ರಾಮಕ್ಕೆ ಭಾರತಿ ಹಾಗೂ ಗುರುನಾಥರಡ್ಡಿ ಅವರು ಬಂದಿರುವುದನ್ನು ಖಾತರಿ ಪಡಿಸಿಕೊಂಡ ಬಸವರಾಜ, ಕ್ರೂಜರ್ ಜೀಪು ತೆಗೆದುಕೊಂಡು ಅದರಲ್ಲಿ ಹರಿತವಾದ ಚಾಕು, ಖಾರದ ಪುಡಿ, ಕ್ರಿಮಿನಾಶಕ ಔಷಧಿ ಹಾಕಿಕೊಂಡು ಭಾರತಿ ಮತ್ತು ಗುರುನಾಥರೆಡ್ಡಿ ಅವರು ಶಹಾಪುರಕ್ಕೆ ಕಾರಿನಲ್ಲಿ ಹೋಗುವುದನ್ನು ಕಾಯುತ್ತಾ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆದರೆ, ಅದೇ ದಿನ ಭಾರತಿ ಹಾಗೂ ಗುರುನಾಥರಡ್ಡಿ ಮರಳಿ ಕಾರಿನಲ್ಲಿ ಶಹಾಪುರದಿಂದ ರಸ್ತಾಪುರಕ್ಕೆ ಆಗಮಿಸುವುದನ್ನು ಹಿಂಬಾಲಿಸಿಕೊಂಡು ಬಸವರಾಜ ತನ್ನ ಕ್ರೂಜರ್ ಜೀಪ್ನಲ್ಲಿ ಆಗಮಿಸಿ ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಹತ್ತಿರ ಭಾರತಿ ಹಾಗೂ ಗುರುನಾಥರಡ್ಡಿ ಅವರು ಇದ್ದ ಕಾರಿಗೆ ಓವರ್ ಟೇಕ್ ಮಾಡುವ ನೆಪದಲ್ಲಿ ಕಾರಿಗೆ ಜೋರಾಗಿ ಗುದ್ದಿ ಭಾರತಿ ಹಾಗೂ ಗುರುನಾಥರಡ್ಡಿ ಇಬ್ಬರನ್ನು ಕೊಲೆ ಮಾಡುತ್ತಾನೆ.
ಶಹಾಪುರ ಠಾಣೆಯ ಅಂದಿನ ಪಿಐ ಜೆ.ಎಸ್.ನ್ಯಾಮಗೌಡರ್ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು.
ಫಿರ್ಯಾದಿದಾರ ಪರವಾಗಿ ಸರ್ಕಾರಿ ಅಭಿಯೋಜಕ ವಿಶ್ವನಾಥ ಉಭಾಳೆ ವಾದಿಸಿದ್ದರು.
ಈ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾ ರೀತಿಯಲ್ಲಿ ಇದು ಕೊಲೆ ನಡೆದಿತ್ತು ಎನ್ನುತ್ತಾರೆ ಸರ್ಕಾರಿ ಅಭಿಯೋಜಕ ಸಿಬ್ಬಂದಿಯೊಬ್ಬರು.