ಗುರುಮಠಕಲ್: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ನೀಲಪ್ರಭ ಬಬಲಾದ ಅವರಿಗೆ ಮನವಿ ಪತ್ರ ನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ಎಲ್ಲೇರಿ ಮಾತನಾಡಿ, ‘ನಾಮಫಲಕದಲ್ಲಿ ಕನ್ನಡ ಬಳಕೆ ಮಾಡುವಂತೆ ಮಾಲ್ನವರಿಗೆ ತಾಕೀತು ಮಾಡಿದರೆ ನಾರಾಯಣಗೌಡರ ವಿರುದ್ಧ ದೂರು ದಾಖಲಿಸಿ ಬಂಧಸಿದ್ದು ಖಂಡನೀಯ. ಸರ್ಕಾರ ಕೂಡಲೇ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಸರ್ಕಾರ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಬಾರದು. ಜತೆಗೆ ನ್ಯಾಯಾಲಯವೂ ಖಾಸಗಿ ಸಂಸ್ಥೆಗಳ ಫಲಕಗಳಲ್ಲೂ ಶೇ 60 ರಷ್ಟು ಕನ್ನಡ ಬಳಕೆ ಮಾಡುವಂತೆ ತೀರ್ಪು ನೀಡಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೋರಿದರು.
ಮುಖಂಡ ಗೋಪಾಲಕೃಷ್ಣ ಮೇದಾ ಮಾತನಾಡಿ,‘ಸರ್ಕಾರ ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ನಾರಾಯಣಗೌಡ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಕನ್ನಡ ಬಳಕೆಗೆ ಕ್ರಮ ವಹಿಸಬೇಕು. ವಿಳಂಬ ಧೊರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.