ಯಾದಗಿರಿ: ರಂಜಾನ್ ಮಾಸದಲ್ಲಿ ನಗರದ ವಿವಿಧೆಡೆ ‘ಹಲೀಂ’ (ಮಾಂಸ, ಗೋಧಿ, ಬೆಳೆ) ಘಮ ಸಂಜೆ ವೇಳೆ ಕಂಡು ಬರುತ್ತಿದೆ.
ನಗರದಲ್ಲಿ ಕಳೆದ ನಾಲ್ಕೈದು ಐದು ವರ್ಷಗಳಲ್ಲಿ ಹಲೀಂ ತಯಾರಿಕೆ ಇರಲಿಲ್ಲ. ಈಗ ವಿವಿಧೆಡೆ ತಲೆ ಎತ್ತಿದ್ದು, ಗ್ರಾಹಕರನ್ನು ಕೈಬಿಸಿ ಕರೆಯುತ್ತಿದೆ.
ರಂಜಾನ್ ಮಾಸದ ಹಬ್ಬದ ಅಂಗವಾಗಿ ಮುಸ್ಲಿಮರು ಉಪವಾಸ ವ್ರತ ಕೈಗೊಂಡಿದ್ದು, ಇಫ್ತಾರ್ (ಉಪವಾಸ ಬಿಡುವ) ವೇಳೆ ಚಾಟ್ ಸೆಂಟರ್ಗಳು ಗ್ರಾಹಕರಿಂದ ತುಂಬಿರುತ್ತದೆ.
ನಗರದ ಸುಮಾರು 8–10 ಕಡೆ ಹಲೀಂ ತಯಾರಿಸಲಾಗುತ್ತಿದೆ. ಅಲ್ಲದೇ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಹಲೀಂ ತಯಾರಿಕೆ ಜೋರಾಗಿದೆ.
ಸ್ಥಳೀಯವಾಗಿ ಹಲೀಂ ತಯಾರಿಕೆ ಮಾಡುವವರು ಕಡಿಮೆ ಇರುವುದರಿಂದ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ತಯಾರಿಸಲಾಗುತ್ತಿದೆ.
ತೆಲಂಗಾಣದ ಹಲೀಂ ಘಮ:
ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್, ನಾರಾಯಣಪೇಟದಿಂದ ಹಲೀಂ ತಯಾರಿಕೆಗಾಗಿ ಬರುತ್ತಾರೆ. ಅಲ್ಲದೇ ನಾರಾಯಣಪೇಟದಿಂದ ಕೆಲ ಪ್ರಸಿದ್ಧ ಹೋಟೆಲ್ನಿಂದ ಮಟನ್, ಚಿಕನ್ ಹಲೀಂ ಪಾರ್ಸೆಲ್ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ಟೆಂಟ್ ಹಾಕಿ ಮಾರಾಟ:
ನಗರದ ವಿವಿಧೆಡೆ ಹಲೀಂ ತಯಾರಿಸಿ ಟೆಂಟ್ ಹಾಕಿ ಮಾರಾಟ ಮಾಡಲಾಗುತ್ತಿದೆ. ಪ್ರಮುಖ ವೃತ್ತ ಮತ್ತು ರಸ್ತೆಯ ಮುಂಭಾಗದಲ್ಲಿಯೇ ಹಲೀಂ ತಯಾರಿಸುವುದರಿಂದ ಗ್ರಾಹಕರ ಕಣ್ಣಿಗೆ ಕಾಣಿಸುತ್ತಿದೆ. ಮುಂದಿನ ವಾರ ರಂಜಾನ್ ಹಬ್ಬ ಇರುವುದರಿಂದ ಅಲ್ಲಿಯತನಕ ಮಾತ್ರ ಕಾರ್ಯನಿರ್ವಹಿಸಲಿದ್ದು, ನಂತರ ಮುಚ್ಚಲಾಗುತ್ತಿದೆ.
ಯಾದಗಿರಿ ನಗರದಲ್ಲಿ ರಂಜಾನ್ ಅಂಗವಾಗಿ ಹೈದರಾಬಾದ್ನಿಂದ ಬಂದು ಇಲ್ಲಿ ಹಲೀಂ ತಯಾರು ಮಾಡುತ್ತಿದ್ದು ಗ್ರಾಹಕರಿಂದ ಭರ್ಜರಿ ಬೇಡಿಕೆ ಇದೆಅಬ್ದುಲ್ ರಜಾಕ್ ಏಜಾಸ್, ಹೈದರಾಬಾದ್ ಹಲೀಂ ತಯಾರಕ
ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಹಲೀಂ ತಯಾರಿಸಲಾಗುತ್ತಿದೆ. ಬಿಸಿಬಿಸಿ ಹಲೀಂ ನೀಡುವುದರಿಂದ ಪಾರ್ಸೆಲ್ ಕೂಡ ಜಾಸ್ತಿ ಮಾರಾಟವಾಗುತ್ತಿದೆಖಾಜಾ ಸಾಬ್ ಹಲೀಂ ತಯಾರಿಕಾ ಮಾಲೀಕ
ಕಲ್ಲಂಗಡಿ ಈರುಳ್ಳಿ ಭಜ್ಜಿಗೆ ಬೇಡಿಕೆ ರಂಜಾನ್ ತಿಂಗಳಲ್ಲಿ ಇಫ್ತಾರ್ ವೇಳೆ ಮಸೀದಿ ಪಕ್ಕದಲ್ಲಿ ಕಲ್ಲಂಗಡಿ ಮೊಸರು ವಡೆ ಈರುಳ್ಳಿ ಭಜ್ಜಿಗೆ ಭಾರಿ ಬೇಡಿಕೆ ಬಂದಿದ್ದು ಭರ್ಜರಿ ಬಿಕರಿಯಾಗುತ್ತಿದೆ. ಪಾಲಕ್ ಸಮೋಸ ಆಲೂಗಡ್ಡೆ ಸಮೋಸ ಈರುಳ್ಳಿ ಸಮೋಸ ಮಾರಾಟಕ್ಕೆ ಇಡಲಾಗಿದೆ. ತಳ್ಳುಗಾಡಿಗಳಲ್ಲಿ ರಾತ್ರಿ 11 ರ ತನಕ ಮೊಸರು ವಡೆ ಸಿಗುತ್ತದೆ. ಜುಮಾ ಅಲ್ವಿಧಾ ವಿಶೇಷ: ರಂಜಾನ್ ಮಾಸದ ಕೊನೆಯ ಶುಕ್ರವಾರ (ಏ.5ರಂದು) ಜುಮಾ ಅಲ್ವಿಧಾ ಎಂದು ಆಚರಣೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮಾಡಿರುವ ಉಪವಾಸಕ್ಕಿಂತ ಈ ವಾರದಲ್ಲಿ ಮಾಡುವ ಪ್ರಾರ್ಥನೆ ಶ್ರೇಷ್ಠವಾಗಿದೆ ಎಂದು ಮುಸ್ಲಿಂ ಧರ್ಮಗಳು ಹೇಳುತ್ತಾರೆ. ಅಲ್ಲದೇ ಶಾಬ್ ಖದರ್ ರಂಜಾನ್ ಮಾಸದ 26 ನೇ ದಿನದ ವಿಶೇಷ ಇರುತ್ತದೆ. ರಾತ್ರಿ ವೇಳೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.