ಶಹಾಪುರ: ರಾಜ್ಯ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆಯ ಚುನಾವಣೆಯ ರಣ ಕಹಳೆ ಮೊಳಗಿಸಿವೆ. ಆದರೆ ತಾಲ್ಲೂಕು ಮಟ್ಟದಲ್ಲಿ ಮಾತ್ರ ಮೈತ್ರಿ ಕಂಡುಬರುತ್ತಿಲ್ಲ. ಎರಡು ಪಕ್ಷದ ಕಾರ್ಯಕರ್ತರು, ಮುಖಂಡರು ಮಾನಸಿಕವಾಗಿ ಇನ್ನೂ ದೂರವಾಗಿ ಇದ್ದಾರೆ ಎಂಬ ಭಾವನೆ ಎದ್ದು ಕಾಣುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಗುರು ಪಾಟೀಲ ಶಿರವಾಳ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ನಿರಾಕರಿಸಿದಾಗ ಜೆಡಿಎಸ್ಗೆ ಬಂದು ಸ್ಫರ್ಧಿಸಿದ್ದರು. ಸುಮಾರು ಎಂಟಕ್ಕೂ ಹೆಚ್ಚು ನಗರಸಭೆಯ ಬಿಜೆಪಿ ಸದಸ್ಯರು ಟೊಂಕಕಟ್ಟಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಅಲ್ಲದೆ ಬಿಜೆಪಿ ಮುಖಂಡರು ಸಹ ಮೃಧು ಧೋರಣೆ ತಾಳಿ ಪಕ್ಷದಿಂದ ಹೊರ ಹಾಕಲಿಲ್ಲ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಮೀನರಡ್ಡಿ ಪಾಟೀಲ ಯಾಳಗಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಕೊಂಡು ಶಹಾಪುರ ನಗರದಲ್ಲಿ ಭರ್ಜರಿಯಾಗಿ ಪದಗ್ರಹಣ ಕಾರ್ಯಕ್ರಮ ನಡೆಸಿದರು. ಆಗ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ ಅವರನ್ನು ಬೆಂಬಲಿಸಿದ್ದ ನಗರಸಭೆಯ ಸದಸ್ಯರನ್ನು ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಅಂದಿನಿಂದಲೂ ಮುಖಂಡ ಮುನಿಸು ಮುಂದುವರೆದಿದೆ. ನಮ್ಮ ನಮ್ಮಲ್ಲಿಯೇ ಒಂದಾಗಿ ಇರೋಣ ಬನ್ನಿ ಎಂದು ಬಿಜೆಪಿಯ ಮುಖಂಡರು ಕರೆದಿಲ್ಲ ಎನ್ನುತ್ತಾರೆ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಬಿಜೆಪಿಯ ಸದಸ್ಯರು ಒಬ್ಬರು.
ಸದ್ಯಕ್ಕೆ ಕ್ಷೇತ್ರದಲ್ಲಿ ಚುನಾವಣೆಯ ಕಾವು ಕಾಣಿಸುತ್ತಿಲ್ಲ. ಕಾರ್ಯಕರ್ತರ ಮುನಿಸಿಗೆ ಮದ್ದರಿಯಲು ನಾಯಕರು ಮುಂದಾಗುತ್ತಿಲ್ಲ. ಇಬ್ಬರು ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಮೈತ್ರಿಯ ಹುಮಸ್ಸು, ಉತ್ಸಾಹ ತೋರುತ್ತಿಲ್ಲ.
ಬಿಜೆಪಿ ಮಾರ್ಗಸೂಚಿ ಕಾರ್ಯಗಳನ್ನು ಅಂದರೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದರು. ಮುಂದೆ ಕ್ಷೇತ್ರದಲ್ಲಿ ರಾಜಕೀಯ ಪ್ರಭಾವ ಬೀರುವ ಸಭೆ ಸಮಾರಂಭಗಳು ನಡೆಯದೆ ಮೌನದೊಳಗೆ ಗುದುಮುರಿಗಿ ನಡೆದಿದೆ ಎನ್ನುತ್ತಾರೆ ಬಿಜೆಪಿಯ ಹಿರಿಯ ಮುಖಂಡರು ಒಬ್ಬರು.