ಹುಣಸಗಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ರಾಜ್ಯದ ಹಿಂದುಳಿದವರು ಹಾಗೂ ಮಹಿಳಾ ಸ್ವಾವಲಂಭನೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಪಾಟೀಲ ಹೇಳಿದರು.
ಹುಣಸಗಿ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಭಾಗದ ಗ್ರಾಮೀಣ ಮಹಿಳೆಯರನ್ನು ಗುರುತಿಸಿ ಸ್ವಾವಲಂಬನೆ ಜೀವನ ನಡೆಸಲು ಹಾಗೂ ಕುಟುಂಬಕ್ಕೆ ಆರ್ಥಿಕವಾಗಿ ಅನುಕೂಲ ಆಗುವಂತೆ ಹೊಲಿಗೆ ತರಬೇತಿ ನೀಡುವ ಮೂಲಕ ಹಲವು ಕುಟುಂಬಗಳಿಗೆ ಅನುಕೂಲ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ವೈದ್ಯ ಮೋಹನ ಕೋರಿ ಮಾತನಾಡಿ, ಕುಟುಂಬ ನಿರ್ವಹಣೆಯಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದ್ದು.ಈ ನಿಟ್ಟಿನಲ್ಲಿ ಅವರಿಗೆ ಇನ್ನೂ ಹೆಚ್ಚಿನ ಅನುಕೂಲ ಒದಗಿಸಿರುವುದು ಒಳ್ಳೆಯದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಹೇಮಾವತಿ.ವಿ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಹಿರಿಯರಾದ ಸಂಗನಗೌಡ ಮಾಗನೂರ, ಸೋಮನಗೌಡ ಗುಳಬಾಳ, ಗುರುದೇವಿ ಹಿರೇಮಠ, ತಾಲ್ಲೂಕು ಯೋಜನಾಧಿಕಾರಿ ಸಂತೋಷ್ ಮಾತನಾಡಿದರು. ಬಾಹುಬಲಿ, ಅನಿತಾ ನಿರೂಪಿಸಿದರು. ಸೇವಾ ಪ್ರತಿನಿಧಿ ಸಂಗಮ್ಮ ಸ್ವಾಗತಿಸಿದರು. ಕೃಷ್ಣವೇಣಿ ವಂದಿಸಿದರು.