ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಜ. 12 ರಿಂದ 16ರ ವರೆಗೆ ನಡೆಯಲಿದ್ದು, ಜಾತ್ರೆ ಸಂದರ್ಭದಲ್ಲಿ ಹರಕೆ ಕುರಿಗಳನ್ನು ತರದಂತೆ ನೋಡಿಕೊಳ್ಳಲು 6 ಚೆಕ್ ಪೋಸ್ಟ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಕುರಿ ಹಾರಿಸುವ ಚಟುವಟಿಕೆಯಲ್ಲಿ ತೊಡಗಿರುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮೈಲಾರಲಿಂಗೇಶ್ವರ ಜಾತ್ರೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿ ಹಾರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಂತಹ ಹರಕೆ ಕುರಿಗಳನ್ನು ಜಾತ್ರೆಗೆ ತರದಂತೆ ನೋಡಿಕೊಳ್ಳಲು ಕಂದಾಯ ಇಲಾಖೆ, ಪೊಲೀಸ್, ಪಶುಸಂಗೋಪನ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಚೆಕ್ ಪೋಸ್ಟ್ಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು.
ಜಾತ್ರೆ ಸಂದರ್ಭದಲ್ಲಿ ಕುರಿ ಹಾರಿಸುವ ಚಟುವಟಿಕೆ ನಡೆಸುವವರ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದಕ್ಕೆ ಪ್ರಚೋದನೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಭಕ್ತರು ಈ ಜಾತ್ರೆಗೆ ಕುರಿಗಳನ್ನು ತರದಂತೆ ಮನವಿ ಮಾಡಿದ ಅವರು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುವುದರಿಂದ ಅಧಿಕಾರಿಗಳು ಸಹ 24 ಗಂಟೆ ಚೆಕ್ ಪೋಸ್ಟ್ನಲ್ಲಿ ಎಚ್ಚರಿಕೆಯಿಂದ ಇರಬೇಕು. ಕುರಿಗಳು ಸಿಕ್ಕಲ್ಲಿ ತಕ್ಷಣ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು ಎಂದು ಸೂಚನೆ ನೀಡಿದರು.
ಜಾತ್ರೆ ಸ್ಥಳದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗುತ್ತದೆ. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಚೆಕ್ಪೋಸ್ಟ್, ಮಹಿಳೆಯರು ಇರುವ ಸ್ಥಳಗಳಲ್ಲಿ ಮತ್ತು ಅವಶ್ಯಕತೆ ಇರುವ ಕಡೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದರು.
ಜಾತ್ರೆಯಲ್ಲಿ ರೋಗ ರುಜಿನ ಹರಡದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರನ್ನು ನಿಯೋಜಿಸಿ, ಅವಶ್ಯಕ ಔಷಧಿ ಇಟ್ಟುಕೊಳ್ಳಬೇಕು. ಅಗ್ನಿ ಆಕಸ್ಮಿಕ ತಡೆಯಲು ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ನಂದಿಸುವ ಹೆಚ್ಚಿನ ಪರಿಕರಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಹೊನ್ನಕೆರೆಯ ನೀರನ್ನು ಕುಡಿಯದಂತೆ ಮತ್ತು ಕೆರೆಯಲ್ಲಿ ಈಜಾಡದಂತೆ ಎಚ್ಚರಿಕೆ ವಹಿಸಲು ಸೂಚಿಸಿದ ಅವರು, 12 ನುರಿತ ಈಜುಗಾರರನ್ನು ನಿಯೋಜಿಸಲು ತಿಳಿಸಿದರು.
ಭಕ್ತರ ಅನುಕೂಲಕ್ಕಾಗಿ ನಿತ್ಯ 65 ಬಸ್ಗಳು ಮತ್ತು ಪ್ರಮುಖ ದಿನವಾದ ಜ. 14ರಂದು 100 ಬಸ್ಗಳ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಲು ಸಂರಕ್ಷಣಾ ಘಟಕ ಸ್ಥಾಪಿಸಿಕೊಂಡು ಜಿಲ್ಲಾ ಮಟ್ಟದ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಯನ್ನು ನೇಮಿಸುತ್ತಿದ್ದು, ಅವರು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಬೇಕು. ಜಾತ್ರಾ ಸ್ಥಳದಲ್ಲಿ ಕ್ಯಾಂಪ್ ಕಚೇರಿ ತೆರೆಯಬೇಕು ಎಂದರು.
ಯಾದಗಿರಿ ಸಹಾಯಕ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಅದರಂತೆ ಜಾತ್ರೆ ಸಂದರ್ಭದಲ್ಲಿ ಮೈಲಾಪುರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಜ. 13 ರ ರಾತ್ರಿ 12 ಗಂಟೆಯಿಂದ ಜ.15ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಪಾನ, ಮದ್ಯಮಾರಾಟ ನಿಷೇಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮಾತನಾಡಿ, ಜಾತ್ರಾ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹೆಸರು, ಸೇವೆ ಮಾದರಿ, ಸೇವೆ ಸ್ಥಳ, ಮೊಬೈಲ್ ಸಂಖ್ಯೆಗಳ ಮಾಹಿತಿಯನ್ನು ಇಲಾಖೆಗೆ ಮುಂಚಿತವಾಗಿ ನೀಡಬೇಕು. ಜಾತ್ರೆ ಸ್ಥಳದಲ್ಲಿ ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅವಶ್ಯಕ ಬಂದೋಬಸ್ತ್ ಮಾಡಲಾಗುವುದು ಎಂದು ಹೇಳಿದರು.
8 ವೈದ್ಯರನ್ನು ಮತ್ತು ಇತರ ಸಿಬ್ಬಂದಿಯನ್ನು ನೇಮಿಸುತ್ತಿದ್ದು, 5 ಕಡೆ ನೀರಿನ ಸಂಪನ್ಮೂಲಗಳಿಗೆ ಕ್ಲೋರಿನೇಟ್ ಮಾಡಲಾಗುವುದು. ಬ್ಲೀಚಿಂಗ್ ಪೌಡರ್ ಸಹ ಬಳಸಲಾಗುವುದು. ಅದರಂತೆ ಜೆಸ್ಕಾಂನಿಂದ ಇಬ್ಬರು ಸೆಕ್ಷನ್ ಆಫೀಸರ್ ಮತ್ತು 16 ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅಗ್ನಿಶಾಮಕ ಇಲಾಖೆಯಿಂದ ನುರಿತ ಈಜುಗಾರರು, ಇತರೆ ಸುರಕ್ಷಿತ ಸಾಧನೆಗಳನ್ನು ಇಟ್ಟುಕೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.