ಯಾದಗಿರಿ: ನಾವು ಹೈದರಾಬಾದ್ಗೆ ಗುಳೆ ಹೋಗಿದ್ದ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಾಮುಲು ಬುಗ್ಗಪ್ಪ ಅಗಸರ ದುಕಾನ್ ಎಂಬುವವರು ತಮ್ಮ ಮನೆಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಕವಿತಾ ಶ್ರೀನಿವಾಸ್ ದೂರಿದ್ದಾರೆ.
ಈ ಕುರಿತು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಗುರುಮಠಕಲ್ ತಾಲ್ಲೂಕಿನ ಅನಪೂರ ಗ್ರಾಮದಲ್ಲಿ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಕವಿತಾ ತಾಯಿ ನಾರಾಯಣಮ್ಮ ನಾಗಪ್ಪ ಏಳುಕೋಟಿ ಇವರಿಗೆ ಕಳೆದ 2011-2012ರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮಂಜೂರಾಗಿತ್ತು.
ಇದೇ ಮನೆಯಲ್ಲಿ ವಾಸವಿದ್ದಾಗಲೇ ತಾಯಿ ಮೃತಪಟ್ಟಿದ್ದರಿಂದ ಇದ್ದ ಏಕೈಕ ಮಗಳಿಗೆ ಈ ಮನೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿತ್ತು. ಆದರೆ, ಬಡತನದ ಕಾರಣ ಗುಳೆ ಹೋಗಿದ್ದ ಹಿನ್ನೆಲೆಯನ್ನು ಅಧಿಕಾರ ದುರುಪಯೋಗ ಪಡಿಸಿಕೊಂಡ ರಾಮುಲು ಅಕ್ರಮವಾಗಿ ಮನೆಯನ್ನು ವಶ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.