ಯಾದಗಿರಿ: ಬಿಜೆಪಿ ತೊರೆದು ಕೆಜೆಪಿ ಪಕ್ಷ ರಚಿಸಿದ್ದ ಯಡಿಯೂರಪ್ಪ ಆಗ ರಾಜ್ಯ ಜನರ ಮುಂದೆ ‘ರಕ್ತದಲ್ಲಿ ಬರೆದು ಕೊಡುವೆ ಮತ್ತೆಂದೂ ಬಿಜೆಪಿಗೆ ಮರಳು ವುದಿಲ್ಲ’ ಎಂದು ಪ್ರಮಾಣ ಮಾಡಿದ್ದರು. ಆದರೆ, ಒಂದು ವರ್ಷದಲ್ಲೇ ಬಿಜೆಪಿಗೆ ಮರಳಿದ್ದಾರೆ. ಹಾಗಾಗಿ, ಅವರೊಬ್ಬ ಮಹಾ ಸುಳ್ಳುಗಾರ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು
ಜೆಡಿಎಸ್ ವಕ್ತಾರ ವೈ.ವಿ.ಎಸ್. ದತ್ತ ಹೇಳಿದರು.
‘ರಾಜ್ಯದಲ್ಲಿ ನಿರಂತರ ಬರಪರಿಸ್ಥಿತಿ ಇದೆ. ಮೂರು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೇ ಬರದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬಗ್ಗೆ ಕಿಂಚಿತ್ತೂ ಕರುಣೆ ತೋರದೇ ಪರಸ್ಪರ ಕಸರೆರಚಾಟದಲ್ಲಿ ತೊಡಗಿವೆ. ಸಾಲ ಮನ್ನಾ ವಿಷಯದಲ್ಲಿ ಕೇಂದ್ರ–ರಾಜ್ಯಗಳ ನಡುವೆ ನಡೆಯುತ್ತಿರುವ ರಾಜಕೀಯ ದಿಂದಾಗಿ ರೈತರು ಬೇಸತ್ತಿದ್ದಾರೆ’ ಎಂದರು.
‘ರಾಜ್ಯ ಸರ್ಕಾರ ಇದುವರೆಗೂ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡದೇ ಕೇಂದ್ರದ ಕಡೆ ಬೆರಳು ತೋರಿಸುತ್ತಾ ಮೂರು ವರ್ಷ ಕಾಲಹರಣ ಮಾಡಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ತಾಲ್ಲೂಕಿಗೆ ₹1 ಕೋಟಿ ಬಿಡುಗಡೆ ಮಾಡಿ ರೈತರ ಮೂಗಿಗೆ ತುಪ್ಪ ಸವರಿದೆ’ ಎಂದು ಕಿಡಿಕಾರಿದರು.
‘ಬಿಡುಗಡೆ ಮಾಡಿರುವ ಪರಿಹಾರ ಹಣದಲ್ಲಿ ₹40 ಲಕ್ಷ ಸಿಆರ್ಎಫ್ ಗೆ ಹಾಗೂ ₹60 ಲಕ್ಷ ಶಾಸಕರ ಪರಿಹಾರ ನಿಧಿಗೆ ನೀಡಲಾಗಿದೆ. ತೀವ್ರ ಬರ ಪರಿಸ್ಥಿತಿಯ ಈ ದಿನಗಳಲ್ಲಿ ಸರ್ಕಾರದ ಈ ಕ್ರಮ ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ’ ಎಂದು ವಿಷಾದಿಸಿದರು.
‘ಹೋದ ವರ್ಷ ಬರ ಪರಿಹಾರಕ್ಕೆ ಪ್ರತಿ ಕ್ಷೇತ್ರಕ್ಕೆ ಬಿಡುಗಡೆಯಾದ ₹ 5ಕೋಟಿ ಹಣದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಹೋದ ಪರಿ ಣಾಮ ಹಣ ಖರ್ಚಾಯಿತೇ ಹೊರತು ರೈತರಿಗೆ ಕಿಂಚಿತ್ತೂ ಪ್ರಯೋ ಜನವಾ ಗಲ್ಲಿಲ್ಲ. ಆ ಹಣದಲ್ಲಿ ಖರೀದಿಸಿದ ಟ್ಯಾಂಕ ರ್ಗಳು ಮೂಲೆ ಸೇರಿದವು. ಟ್ಯಾಂಕರ್ ಗಳಿಗೆ ಚಾಲಕರನ್ನು ನೇಮಿಸಲಿಲ್ಲ. ಡೀಸೆಲ್ಗೆ ಹಣ ಬಿಡುಗಡೆ ಮಾಡದ ಕಾರಣ ಖರೀದಿಸಿದ ಲಾರಿಗಳು ಕೆಲಸಕ್ಕೆ ಬರಲಿಲ್ಲ. ಮೇವು ಖರೀದಿಯಲ್ಲಿಯೂ ಸಹ ಅವ್ಯವಹಾರ ನಡೆದಿದೆ’ ಎಂದು ದತ್ತಾ ಟೀಕಿಸಿದರು.
‘ಎರಡು ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಅಡಿಯಾಳುಗಳಾಗಿದ್ದು, ರೈತರ ಪರವಾಗಿ ಎಂದಿಗೂ ಕಾರ್ಯ ನಿರ್ವಹಿಸುವುದಿಲ್ಲ . ಪ್ರಾದೇಶಿಕ ಪಕ್ಷ ಜೆಡಿಎಸ್ ಹೈಕಮಾಂಡ್ನ
ಕಿರಿಕಿರಿ ಇಲ್ಲದೇ ಜನರ ಏಳಿಗಾಗಿ ಶ್ರಮಿಸಿದೆ. 2006ರಲ್ಲಿ ದೊರೆತ 20 ತಿಂಗಳ ಅಲ್ಪವಧಿಯಲ್ಲಿ ಜೆಡಿಎಸ್ ಸರ್ಕಾರ ರೈತರ ₹ 25 ಸಾವಿರ ಸಾಲಮನ್ನಾಮಾಡಿ ಬದ್ಧತೆ ಮೆರೆದಿದೆ’ ಎಂದು ಹೇಳಿದರು.
ನಾಗನಗೌಡ ಕಂದಕೂರ್, ವಿಶ್ವನಾಥ ಶಿರವಾಳ, ಚನ್ನಪ್ಪಗೌಡ ಮೋಸಂಬಿ, ಹನುಮೇ ಗೌಡ ಬೀರನಕಲ್, ಲಿಂಗಣ್ಣ ಕನ್ನೆ ಕೌಳ್ಳೂರು, ಭೋಜನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.