ಹುಣಸಗಿ: ಸುರಪುರ ತಾಲ್ಲೂಕಿನ ದೇವಪುರ- ಬಾಗೇವಾಡಿ - ಮನಗೂಳಿ ರಾಜ್ಯ ಹೆದ್ದಾರಿ 61 ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ.
ಹಾಳಾದ ರಸ್ತೆಯಲ್ಲಿ ತೆಗ್ಗು ತಪ್ಪಿಸಲು ಹೋಗಿ ಹಲವು ವಾಹನಗಳು ಅಪಘಾತಕ್ಕೀಡಾಗಿವೆ.
ಯಾದಗಿರಿ ಜಿಲ್ಲೆಯ ದೇವಪುರದಿಂದ ಹುಣಸಗಿ ಮಾಳನೂರ ಮಾರ್ಗವಾಗಿ ವಿಜಾಪುರ ಜಿಲ್ಲೆಯ ತಾಳಿಕೋಟಿ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ, ವರೆಗೆ ಇದ್ದು ಸುಮಾರು 106 ಕಿ. ಮೀ ಉದ್ದವಿದೆ.
ಈ ರಸ್ತೆ ನಿರ್ಮಾಣಕ್ಕಾಗಿ ಕಳೆದ ಎರಡು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯ ನೆರವಿನೊಂದಿಗೆ ₨248 ಕೋಟಿಯ ಟೆಂಡರ್ ಕರೆಯಲಾಗಿತ್ತು. ರಸ್ತೆ ನಿರ್ಮಾಣದ ನಂತರ ಏಳು ವರ್ಷಗಳವರೆಗಿನ ನಿರ್ವಹಣೆಯ ನಿಯಮಾವಳಿಯಲ್ಲಿನ ಗೊಂದಲದಿಂದಾಗಿ ಗುತ್ತಿಗೆದಾರರು ಹಿಂದೆ ಸರಿದದ್ದು ಕಾಮಗಾರಿ ನನೆಗುದಿಗೆ ಬೀಳಲು ಕಾರಣವೆಂದು ತಿಳಿದು ಬಂದಿದೆ.
ಈ ಭಾಗದಲ್ಲಿ ಒಳ್ಳೆಯ ರಸ್ತೆ ನಿರ್ಮಾಣವಾಗಲಿದೆ ಎಂದು ಸಂತಸದಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳ ರೈತರಲ್ಲಿ ನಿರಾಸೆ ಮೂಡಿಸಿದೆ.
ಪ್ರತಿನಿತ್ ಈ ರಸ್ತೆಯಲ್ಲಿ ನೂರಾರು ಬಸ್ಗಳು ಸಂಚರಿಸುತ್ತಿದ್ದು ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರಿಂದ ವಾಸ್ಕೋ, ಪಣಜಿ, ಮೀರಜ, ಮಂತ್ರಾಲಯ, ಶ್ರೀಶೈಲ, ಹೈದರಾಬಾದ್, ವಿಜಾಪುರ, ಪೂನಾ ಬಸ್ಗಳು ಮಾರ್ಗ ಬದಲಿಸಿ ಸಂಚರಿಸುತ್ತಿವೆ.
‘ಈ ರಸ್ತೆ ಪೂರ್ತಿ ಕೆಟ್ಟಿರುವುದರಿಂದ ನಮ್ಮ ಬೀಗರ ನಮ್ಮೂರಿಗ ಬರದಕ್ಕೂ ಹಿಂದಮುಂದ ನೊಡ್ತಾರೀ ಎಂದು’ ಕಲ್ಲದೇನವಹಳ್ಳಿಯ ಸಿದ್ದಲಿಂಗಯ್ಯಸ್ವಾಮಿ ಹೇಳುತ್ತಾರೆ.
ಹುಣಸಗಿಯಿಂದ ಮಾಳನೂರಗೆ ತೆರಳುವ ರಸ್ತೆಯಲ್ಲಿ ಸುಮಾರು 8 ಕಿ.ಮೀ ವರೆಗೆ ಚಿಕ್ಕ ಡಾಂಬರ್ ರಸ್ತೆ ಕೂಡಾ ಕಾಣ ಸಿಗುವುದಿಲ್ಲ. ವಿಶ್ವ ಬ್ಯಾಂಕ್ ತಂಡ ಉತ್ತರ ಕರ್ನಾಟಕದ ಕಾಮಗಾರಿ ನಡೆಯಲಿರುವ ಜಿಲ್ಲೆಗಳಲ್ಲಿ ಡಿ. 4ರಿಂದ ಡಿ.12ರ ವರೆಗೆ ಭೇಟಿ ನೀಡಿ ಎಲ್ಲ ಮಾಹಿತಿ ಕಲೆಹಾಕಿ ಅಂತಿಮಗೊಳಿಸಲಿದೆ ಎಂದು ಕೆಶಿಪ್ ಮೂಲಗಳಿಂದ ತಿಳಿದುಬಂದಿದೆ.
‘ವಿಶ್ವಬ್ಯಾಂಕ್ ಹಸಿರು ನಿಶಾನೆ ತೋರಿಸಿದರೂ ಕಾಮಗಾರಿ ಆರಂಭವಾಗಲು ಒಂದು ವರ್ಷಬೇಕಾಗುತ್ತದೆ. ಒಂದು ವರ್ಷದವರೆಗೆಯಾದರೂ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ರೈತ ಮುಖಂಡ ರುದ್ರಗೌಡ ಆಗ್ರಹಿಸಿದ್ದಾರೆ.
ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವದಿಲ್ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.