ಹಾಸನ: ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಬೆಂಬಲಿಸಿ ಕಳೆದ ಏಳು ದಿನಗಳಿಂದ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೆ, ಮಂಗಳವಾರ ಮೊದಲ ಬಾರಿ ಹಾಸನದಲ್ಲಿ ಸತ್ಯಾಗ್ರಹವನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ.
ಭ್ರಷ್ಟಾಚಾರ ವಿರೋಧಿ ದಲಿತ, ರೈತ, ಕಾರ್ಮಿಕರ ವೇದಿಕೆಯವರು ಬೆಳಿಗ್ಗೆ 10.30ರಿಂದ ಮಧ್ಯಾಹ್ನದವರೆಗೆ ಪಿ.ಬಿ ರಸ್ತೆಯ ಫುಟ್ಪಾತ್ ಮೇಲೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಜನಲೋಕಪಾಲ ಮಸೂದೆಯನ್ನು ವಿರೋಧಿಸುತ್ತ, ~ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಸರಿ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಮೂಲ ಸಿದ್ಧಾಂತ. ಜನಲೋಕಪಾಲ ಮಸೂದೆ ಅಂಗೀಕರಿಸಿದರೆ ಈ ಸಿದ್ಧಾಂತವೇ ಬುಡ ಮೇಲಾಗುತ್ತದೆ. ನಾವು ಭ್ರಷ್ಟಾಚಾರದ ಪರ ವಹಿಸುತ್ತಿಲ್ಲ. ಆದರೆ ಜನಲೋಕಪಾಲ ಮಸೂದೆಯನ್ನು ವಿರೋಧಿಸುತ್ತೇವೆ~ ಎಂದರು.
ನಮ್ಮಲ್ಲಿ ಈಗಾಗಲೇ ಸಾಕಷ್ಟು ಕಾನೂನುಗಳಿದ್ದು ಅವುಗಳನ್ನು ಸರಿಯಾಗಿ ಜಾರಿ ಮಾಡಿದರೆ ಭ್ರಷ್ಟಾಚಾರ ತಡೆಗೆ ಇನ್ನೊಂದು ಕಾನೂನು ಬೇಕಾಗುವುದಿಲ್ಲ~ ಎಂದರು. ಅಣ್ಣಾ ಹೋರಾಟ ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದೂ ಶಿವಪ್ರಸಾದ್ ನುಡಿದರು.