ಕಾರವಾರ: ಇಲ್ಲಿಯ ಅಲಿಗದ್ದಾ ಹಾಗೂ ಬೈತಖೋಲ ಬಂದರಿನಲ್ಲಿ ದಾಸ್ತಾನು ಇದ್ದ ಅದಿರು ಕಳವು ಆಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಎದುರುಫೆ. 15ರೊಳಗೆ ಹಾಜರಾಗಬೇಕಿದ್ದ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ.
ಸಿಐಡಿ ಅಪರಾಧಗಳ ವಿಭಾಗದ ಪೊಲೀಸ್ ಉಪಾಧೀಕ್ಷಕಎನ್. ಮೋಹನ್ರಾವ್ ನೇತೃತ್ವದ ತಂಡ ಫೆ. 12ರಂದು ಕಾರವಾರಕ್ಕೆ ಆಗಮಿಸಿ, ಬಂದರು ಅಧಿಕಾರಿ ಭೇಟಿ ಆಗದೇ ಇರುವ ಹಿನ್ನೆಲೆಯಲ್ಲಿ ಅವರ ಕಚೇರಿಗೆ ನೋಟಿಸ್ ಅಂಟಿಸಿ ಅದಿರು ಕಳ್ಳತನಕ್ಕೆ ಸಂಬಂಧಪಟ್ಟ ತನಿಖೆಗೆ ಸಹಕರಿಸಬೇಕು ಎಂದು ಕೋರಿತ್ತು.
ಅವಧಿ ಮುಗಿದು ಎರಡು ದಿನಗಳ ಕಳೆದರೂ ಕ್ಯಾ. ಸ್ವಾಮಿ ಸಿಐಡಿ ತಂಡದ ಎದುರು ಹಾಜರಾಗಲಿಲ್ಲ. ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಪ್ರಭಾರ ನಿರ್ದೇಶಕರಾಗಿದ್ದ ಅವರು ಸೇವೆಗೆ ಬಾರದೇ ಇರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರ್. ಮೋಹನ ಗುರುವಾರ ಸಂಜೆ ಹೆಚ್ಚುವರಿಯಾಗಿ ಬಂದರು ನಿರ್ದೇಶಕರ ಅಧಿಕಾರ ವಹಿಸಿಕೊಂಡಿದ್ದಾರೆ.