ಹಾಸನ: ಆಲೂರು ತಾಲ್ಲೂಕಿನಲ್ಲಿ ಮಂಗಳವಾರ ಮುಂಜಾನೆ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ತಾಲ್ಲೂಕಿನ ಹಲಸೂರಿನ ಗೋಪಾಲ್ ಎಂಬುವವರ ತೋಟದಲ್ಲಿ ರೈಟರ್ ಆಗಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸುಬ್ಬಯ್ಯ (62) ಮೃತ ವ್ಯಕ್ತಿ.
ಮಂಗಳವಾರ ಮುಂಜಾನೆ 8.30ಕ್ಕೆ ಎಂದಿನಂತೆ ಸಿಬ್ಬಂದಿಯ ಹಾಜರಾತಿ ತೆಗೆದುಕೊಳ್ಳಲು ತೋಟಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರ್ ಎದುರಾದ ಕಾಡಾನೆ ಇವರನ್ನು ಎತ್ತಿ ರಸ್ತೆಯ ಮೇಲೆ ಎಸೆಯಿತು.
ಅಲ್ಲದೆ ಕಿಬ್ಬೊಟ್ಟೆಯ ಮೇಲೆ ಕಾಲಿಟ್ಟು ಮುಂದೆ ಚಲಿಸಿದೆ. ಪಕ್ಕದಲ್ಲೇ ಇದ್ದ ನೀಲಮ್ಮ ಎಂಬುವವರನ್ನೂ ತಳ್ಳಿ ಗಾಯಗೊಳಿಸಿದೆ. ಕಾಡಾನೆ ತುಳಿತದಿಂದಾಗಿ ಸುಬ್ಬಯ್ಯ ಅವರ ಬಲಗಾಲಿನ ಚರ್ಮ ಸುಲಿದಿದೆ, ಹೊಟ್ಟೆಯ ಭಾಗದಲ್ಲೂ ತೀವ್ರ ಸ್ವರೂಪದ ಗಾಯಗಳಾದವು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ, ಕಣದಳ್ಳಿಗೆ ಬರುವಷ್ಟರಲ್ಲಿ ಅವರು ಮೃತರಾದರು.