ಹುಣಸೂರು: ಪಟ್ಟಣದ ಇಬ್ಬರು ವಿದ್ಯಾರ್ಥಿಗಳ ಅಪಹರಣ. ಕೊಲೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಇನ್ನು ಮೂರು ದಿನದೊಳಗೆ ಬಹಿರಂಗ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಭಾನುವಾರ ತಿಳಿಸಿದರು.
ಕೊಲೆಯಾದ ಸುಧೀಂದ್ರ ಹಾಗೂ ವಿಘ್ನೇಶ್ ಅವರ ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಂಶಯಗಳಿಗೆ ಸರ್ಕಾರ ಉತ್ತರಿಸಲಿದೆ ಎಂದು ಹೇಳಿದರು.
ಘಟನೆ ಬಗ್ಗೆ ಸರ್ಕಾರ ಕಣ್ಮುಚಿ ಕುಳಿತಿಲ್ಲ. ಅಪಹರಣಗೊಂಡ ದಿನದಿಂದಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ದೂರು ಸ್ವೀಕರಿಸುವ ವಿಚಾರದಲ್ಲಿ ಗೊಂದಲವನ್ನು ಉಂಟು ಮಾಡಿದ ಪೊಲೀಸ್ ಇಲಾಖೆ ಬಗ್ಗೆ ನನಗೆ ಅಸಮಾಧಾನವಿದೆ. ರಾಜಕಾರಣಿಗಳು ಸಮಸ್ಯೆಗೆ ಸ್ಪಂದಿಸಿಲ್ಲವೆಂದು ಜನರು ದೂರುವುದು ಸಹಜವೇ, ಆದರೆ ತೆರೆಮರೆಯಲ್ಲಿ ಸರ್ಕಾರ ತನ್ನ ಕರ್ತವ್ಯ ಪಾಲನೆ ಮಾಡುತ್ತಲೇ ಇರುತ್ತದೆ ಎಂದರು.
`ಅಪಹರಣಕಾರರನ್ನು ಬಂಧಿಸಿ ಜನಸಾಮಾನ್ಯರಿಗೆ ರಕ್ಷಣೆ ನೀಡಿ. ನಮಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು. ಮಕ್ಕಳಿಗೆ ಭದ್ರತೆ ಕಲ್ಪಿಸಿ. ಅಪಹರಣಕಾರರನ್ನು ಶಿಕ್ಷಿಸಿ ಪಾಠ ಕಲಿಸಿ~ ಎಂದು ಸಚಿವರಿಗೆ ಸುಧೀಂದ್ರನ ತಾಯಿ ಜ್ಯೋತಿ ವಿನಂತಿಸಿದರು.