ಹರಪನಹಳ್ಳಿ: ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸದಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕ್ರಮ ವಿರೋಧಿಸಿ ತಾಲ್ಲೂಕಿನ ಬಾಪೂಜಿನಗರ (ಉದ್ದಗಟ್ಟೆ ದೊಡ್ಡತಾಂಡಾ) ಗ್ರಾಮದ ಯುವಕರು ತೊಗರಿಕಟ್ಟೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಶುಕ್ರವಾರ ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್) ಮತ್ತು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದ ಯುವಕರು ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಎಸ್ಎಫ್ ಸಂಘಟನೆ ರಾಜ್ಯ ಘಟಕದ ಸಂಚಾಲಕ ಎಚ್.ಎಂ. ಸಂತೋಷ್ ಮಾತನಾಡಿ, ಸ್ವಾತಂತ್ರ್ಯ ದೊರಕಿ ಆರು ದಶಕಗಳು ಉರುಳಿದರೂ, ಕುಡಿಯುವ ನೀರು, ಬೀದಿ ದೀಪ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಚರಂಡಿ ವ್ಯವಸ್ಥೆ ಕಲ್ಪಿಸದೆ, ಬುಡಕಟ್ಟು ಸಮುದಾಯ ವಾಸಿಸುವ ತಾಂಡಾಗಳನ್ನು ಪಂಚಾಯ್ತಿ ಅಧಿಕಾರಶಾಹಿ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.
ಪರಿಣಾಮವಾಗಿ ಹನಿ ನೀರಿಗಾಗಿ ಮನೆ ಮಂದಿಯೆಲ್ಲಾ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಗ್ರಾಮದಲ್ಲಿ ಬೀದಿ ದೀಪಗಳನ್ನು ಅಳವಡಿಸದೆ ಇರುವ ಕಾರಣ, ಸಂಜೆಯಾಗುತ್ತಿದ್ದಂತೆಯೇ ಗ್ರಾಮದಲ್ಲಿ ಕಾರ್ಗತ್ತಲು ಆವರಿಸಿಕೊಳ್ಳುತ್ತಿದೆ.
ಹಾವು, ಚೇಳು ಮುಂತಾದ ವಿಷ ಜಂತುಗಳ ಭಯದಿಂದಲೇ ಇಲ್ಲಿನ ಜನ ಜೀವಿಸಬೇಕಾಗಿದೆ. ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೊಳಚೆ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿದು, ಸಮೀಪದ ಅಂಗನವಾಡಿ ಅಂಗಳಕ್ಕೆ ಸಂಗ್ರಹ ಆಗುತ್ತಿರುವುದರಿಂದ ಮಕ್ಕಳು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಲವು ಮುಖಂಡರು ಭಾಗವಹಿಸಿದ್ದರು.