ಚಿಕ್ಕಮಗಳೂರು: ‘ಯೋಗವಿದ್ಯೆಯ ರೂಪದಲ್ಲಿ ಭಗವಂತ ಜಗತ್ತಿಗೆ ಅಮೃತವನ್ನು ನೀಡಿದ್ದಾನೆ.ಆದರೆ ಅದರ ಅರಿವಿಲ್ಲದೆ ನಾವು ಆರೋಗ್ಯವನ್ನು ಹಣ ಕೊಟ್ಟು ಪಡೆಯಲು ಯತ್ನಿಸುತ್ತೇವೆ. ಎಲ್ಲೆಲ್ಲೋ ಹುಡುಕಾಡುತ್ತೇವೆ’ ಎಂದು ಶಾಸಕ ಸಿ.ಟಿ.ರವಿ ವಿಷಾದಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯು ನಗರದ ಟೌನ್ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಥಸಪ್ತಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಗೆ ಮಾನಸಿಕ ಒತ್ತಡವೇ ಮುಖ್ಯ ಕಾರಣ. ಇದರಿಂದ ಹೊರಬಂದು ಚೈತನ್ಯಶೀಲರೂ ಮತ್ತು ನಿರೋಗಿಯಾಗಿರಲು ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ವರದರಾಜು, ನಗರದಲ್ಲಿ ಯೋಗ ಭವನ ನಿರ್ಮಿಸಲಾಗುತ್ತಿದೆ.ಭವನ ಶೀಘ್ರ ಪೂರ್ಣಗೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ರಥಸಪ್ತಮಿ ಅಂಗವಾಗಿ ನಡೆದ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಯೋಗಾಭ್ಯಾಸಿಗಳು ಎರಡು ಗಂಟೆಗೂ ಅಧಿಕ ಸಮಯವನ್ನು ತೆಗೆದುಕೊಂಡು ಒಟ್ಟು 108 ಸೂರ್ಯ ನಮಸ್ಕಾರ ಮಾಡಿದರು. ಉದ್ಯಮಿ ಶ್ರೀನಿವಾಸ ರಾವ್, ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ರಮೇಶ್, ಸಮಿತಿಯ ಮುಖಂಡರಾದ ಗೌತಮ್ ಮತ್ತು ಮಂಜುಳಾ ಇದ್ದರು.