ಮುಧೋಳ: ಕಬ್ಬು ಬೆಳೆಗಾರರ ಎರಡು ಗುಂಪುಗಳ ಮಧ್ಯೆ ಇಲ್ಲಿಗೆ ಸಮೀಪದ ಮಂಟೂರು ಹಾಗೂ ಮುಧೋಳ ಪಟ್ಟಣದಲ್ಲಿ ಶನಿವಾರ ಘರ್ಷಣೆ ಸಂಭವಿಸಿದ್ದರಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಇದರ ನಡುವೆಯೂ ಪಟ್ಟಣದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಪರಿಸ್ಥಿತಿ ಭಾನುವಾರ ಸಂಪೂರ್ಣ ನಿಯಂತ್ರಣದಲ್ಲಿದೆ.
ನ.4ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯ ಫಲಶ್ರುತಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಕಬ್ಬು ಸಾಗಿಸಲು ಬಿಡುವುದಿಲ್ಲ ಎಂದು ಹೇಳಿರುವ ಪ್ರತಿಭಟನಾನಿರತ ರೈತರು ಪಟ್ಟು ಸಡಿಲಿಸಿಲ್ಲ.
ಈಗ ಪರಿಸ್ಥಿತಿ ಶಾಂತವಾಗಿದ್ದು, ಶನಿವಾರ ಘರ್ಷಣೆ ನಡೆಸಿದ ಆರೋಪದ ಮೇಲೆ 35ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದೆ. ಎರಡು ಗುಂಪುಗಳ ರೈತರು ದೂರು- ಪ್ರತಿ ದೂರು ದಾಖಲಿಸಿದ್ದು ಒಟ್ಟು 8 ಪ್ರಕರಣಗಳು ದಾಖಲಾಗಿವೆ.