ಶಿವಮೊಗ್ಗ: ವಿಶ್ವದ ಯಾವುದೇ ಸ್ಥಳದಲ್ಲಿ ಪರಿಸರ ಹಾನಿಗೊಳಗಾದರೂ ಅದರ ಪರಿಣಾಮ ಮತ್ಯಾವುದೋ ಭಾಗದ ಜನರ ಮೇಲೆ ಬೀರಲಿದೆ. ಆದ್ದರಿಂದ ಪರಿಸರ ಸಮತೋಲನ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ಜಿ.ಪಂ. ಸಿಇಒ ಡಾ.ಸಂಜಯ ಬಿಜ್ಜೂರು ಹೇಳಿದರು.
ನಗರದಲ್ಲಿ ಬುಧವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಮನುಷ್ಯ ಪರಿಸರದ ಮೇಲೆ ಹಿಡಿತ ಸಾಧಿಸಿ, ಅದರ ನಾಶಕ್ಕೆ ಕಾರಣವಾಗುವ ಬದಲು ಸಮರ್ಪಕ ರೀತಿಯಲ್ಲಿ ಬಳಸಿ, ಮುಂದಿನ ಪೀಳಿಗೆಗೆ ವ್ಯವಸ್ಥಿತವಾಗಿ ಕೊಂಡೊಯ್ಯಬೇಕಾದ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದರು.
ಸಮಾರಂಭದಲ್ಲಿ ಮರುಮುದ್ರಣಗೊಂಡ ನಾಗರಾಜ್ ಅವರ `ಮನಕುಲದ ನಾಶಕ್ಕೆ ಅಣುಸ್ಥಾವರ ಸಾಕು~ ಕೃತಿಯನ್ನು ಬಿಡುಗಡೆಗೊಳಿಸಿದರು. ಶಾಲಾ-ಕಾಲೇಜು ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.
ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಟಿ.ಎಸ್. ಹೂವಯ್ಯಗೌಡ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ನಿವೃತ್ತ ತಜ್ಞ ಸಲಹೆಗಾರ ಡಾ.ಎ.ಎನ್.ನಾಗರಾಜ್, ಡಿಡಿಪಿಐ ಪರಮಶಿವಪ್ಪ, ಡಾ.ಚಂದ್ರಶೇಖರ್, ಜಿ.ಎಲ್. ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ವೈ.ಎಸ್. ಹರಿಶಂಕರ್ ಸ್ವಾಗತಿಸಿದರು. ಸಿ.ಎಸ್. ಚಂದ್ರಶೇಖರ್ ವಂದಿಸಿದರು.