ಚಿತ್ರದುರ್ಗ: ಕಬೀರಾನಂದಾಶ್ರಮದ 2011ನೇ ಸಾಲಿನ ‘ಆರೂಢ ಶ್ರೀ’ ಪ್ರಶಸ್ತಿಗೆ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಪ್ರಶಸ್ತಿಯು ಸ್ಮರಣಿಕೆ, ಶಾಲು ಹಾಗೂ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಶಸ್ತಿ ಆಯ್ಕೆಗೆ ಆರೂಢ ಸಿದ್ಧಾಂತ ಮತ್ತು ಭಾರತೀಯ ಪರಂಪರೆಯಲ್ಲಿ ಶ್ರದ್ಧೆಯುಳ್ಳವರಾಗಿರಬೇಕು, ಜಾತ್ಯತೀತ ಮೌಲ್ಯಗಳಿಗೆ ಬದ್ಧರಾಗಿರಬೇಕು, ನಿಷ್ಕಳಂಕ ಚಾರಿತ್ರ್ಯ ಹೊಂದಿರಬೇಕು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರಬೇಕು ಹಾಗೂ ಕರ್ನಾಟಕ ಮೂಲದವರಾಗಿರಬೇಕು ಎನ್ನುವ ಅರ್ಹತೆಗಳನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಆಶ್ರಮದ ಕಾರ್ಯದರ್ಶಿಯಾಗಿದ್ದ ದಿ.ಎಚ್. ವೆಂಕಟೇಶ್ ಕುಟುಂಬದವರು ಕಳೆದ ಸಾಲಿನಿಂದ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ. ಕಬೀರಾನಂದಾಶ್ರಮದಲ್ಲಿ ಫೆ. 26ರಿಂದ ಮಾರ್ಚ್ 2ರವರೆಗೆ ನಡೆಯಲಿರುವ 81ನೇ ಮಹಾಶಿವರಾತ್ರಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.