ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದು, ಬಿಳಿ ಹೆಣ್ಣು ಹುಲಿ `ರೀಟಾ~ ಭಾನುವಾರ ರಾತ್ರಿ ಮೃತಪಟ್ಟಿದೆ.
20 ವರ್ಷದ `ರೀಟಾ~ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಪ್ರತಿ ದಿನ ಅಗತ್ಯ ಚಿಕಿತ್ಸೆ ನೀಡುತ್ತಿದ್ದರೂ ತೀವ್ರವಾಗಿ ನಿತ್ರಾಣಗೊಂಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
`ರೀಟಾ~ ಬಹುತೇಕ ಹಲ್ಲುಗಳನ್ನು ಕಳೆದುಕೊಂಡಿದ್ದರಿಂದ ಅದಕ್ಕೆ ಎಲುಬು ರಹಿತ ಮಾಂಸ ಮತ್ತು ಸತ್ವಭರಿತ ಆಹಾರ ನೀಡಲಾಗುತ್ತಿತ್ತು. ಇದರ ಕಾಲುಗಳಲ್ಲಿರುವ ಉಗುರುಗಳು ಉದ್ದವಾಗಿ ಬೆಳೆದು ಅದರಲ್ಲಿ ಉಂಟಾಗುವ ತೀವ್ರ ಸ್ವರೂಪದ ನೋವು ಮತ್ತು ಹುಳುಗಳ ಉಪದ್ರವದಿಂದ ಆಗಾಗ ಬಳಲುತ್ತಿತ್ತು.
ಈ ಸಮಸ್ಯೆ ಹೋಗಲಾಡಿಸಲು ಇದರ ಬಲ ಮುಂಗಾಲಿನ ಒಂದು ಉಗುರನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.
`ರೀಟಾ ಇಳಿ ವಯಸ್ಸಿನದಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿದರೂ ಅಥವಾ ಮಾಡದಿದ್ದರೂ ಅದರ ನಿರೀಕ್ಷಿತ ಜೀವಿತ ಅವಧಿ ಬಹಳ ಕಡಿಮೆ ಇತ್ತು. ಒಂದು ವೇಳೆ ಇದನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೆ ನಂತರ ಚೇತರಿಸಿಕೊಳ್ಳಲು ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ~ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ.
`ರೀಟಾ~ ಹುಲಿಯು 1993ರಲ್ಲಿ `ದರ್ಶನ~ ಮತ್ತು `ಪ್ರಿಯದರ್ಶಿನಿ~ ಎಂಬ ಹುಲಿಗಳಿಗೆ ಮೃಗಾಲಯದಲ್ಲೇ ಜನಿಸಿತ್ತು.