ಅಂಕೋಲಾ: ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ `ಅದಾನಿ ಎಕ್ಸ್ಪೋರ್ಟ್ಸ್~ ಸೇರಿದಂತೆ 20 ಅದಿರು ಸಾಗಾಣಿಕೆ ಕಂಪೆನಿಗಳ ವಿರುದ್ಧ ಸಿಐಡಿ ಶುಕ್ರವಾರ ಸ್ಥಳೀಯ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.
ಸಿಐಡಿ ಎಸ್.ಪಿ. ಕೆ.ಪಿ. ಭೀಮಯ್ಯ, ಡಿವೈಎಸ್ಪಿ ಮುದ್ದುಮಹದೇವಯ್ಯ ನೇತೃತ್ವದ ತಂಡವು, ಸ್ಥಳೀಯ ನ್ಯಾಯಾಧೀಶರು ರಜೆಯಲ್ಲಿರುವುದರಿಂದ ಪಕ್ಕದ ಕುಮಟಾ ನ್ಯಾಯಾಲಯದಲ್ಲಿ ಪಟ್ಟಿ ಸಲ್ಲಿಸಿತು.
ನ್ಯಾಯಾಧೀಶರಾದ ಸುಜಾತಾ ಪಾಟೀಲ ಅವರು, ಅಂಕೋಲಾ ನ್ಯಾಯಾಲಯಕ್ಕೆ ಕಡತಗಳನ್ನು ನೀಡುವಂತೆ ನಿರ್ದೇಶಿಸಿದರು. ಆ ಪ್ರಕಾರ, ಅಧಿಕಾರಿಗಳು 75 ಪೆಟ್ಟಿಗೆಗಳಲ್ಲಿದ್ದ 1.5 ಲಕ್ಷ ಪುಟಗಳಷ್ಟು ಕಡತಗಳನ್ನು ಅಂಕೋಲಾ ನ್ಯಾಯಾಲಯಕ್ಕೆ ನೀಡಿದರು.
ಸುಮಾರು 250 ಕೋಟಿ ರೂಪಾಯಿ ಮೊತ್ತದ ಅದಿರು ಬೇಲೆಕೇರಿಯಿಂದ ಅಕ್ರಮವಾಗಿ ವಿದೇಶಗಳಿಗೆ ಸಾಗಾಣಿಕೆಯಾಗಿದೆ ಎಂಬುದಾಗಿ ದೂರಿದ್ದ ಲೋಕಾಯುಕ್ತ ವಿಶೇಷ ತನಿಖಾಧಿಕಾರಿ, ವಿವಿಧ ಕಂಪೆನಿಗಳ ವಿರುದ್ಧ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.
ಸಿಐಡಿ ಮೊದಲು ಸಲ್ಲಿಸಿದ್ದ ಆರೋಪ ಪಟ್ಟಿ ಕ್ರಮಬದ್ಧವಾಗಿಲ್ಲ ಎಂದು ಈ ಹಿಂದೆ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಪರಿಷ್ಕೃತ ಆರೋಪ ಪಟ್ಟಿಯನ್ನು ಸಿಐಡಿ ತಂಡವು ಶುಕ್ರವಾರ ಸಲ್ಲಿಸಿತು.