ಶಿಗ್ಗಾವಿ (ಹಾವೇರಿ ಜಿಲ್ಲೆ): ಮದುವೆಗೆಂದು ತವರಮೆಳ್ಳಿಹಳ್ಳಿ ಗ್ರಾಮದಿಂದ ಧಾರವಾಡಕ್ಕೆ ಹೊರಟಿದ್ದ ಲಾರಿ ಮಡ್ಲಿ ಕ್ರಾಸ್ ಬಳಿ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟು 68 ಜನರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಮುಂಡಗೋಡದ ನೆಹರು ನಗರದ ನಿವಾಸಿ ನೇತ್ರಾ ಉಮೇಶ ಶಿಂಧೆ (14) ಸ್ಥಳದಲ್ಲಿ ಮೃತಪಟ್ಟರೆ, ತವರಮೆಳ್ಳಿಹಳ್ಳಿ ನಿವಾಸಿ ಬಾಬು ಶಿವಾಜಿ ರಾವ್ ಜಾಧವ್ (45) ಹುಬ್ಬಳ್ಳಿಯ ಕಿಮ್ಸನಲ್ಲಿ ಕೊನೆಯುಸಿರೆಳೆದರು. ಗಾಯಾಳುಗಳ ಪೈಕಿ 24 ಜನರನ್ನು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಇನ್ನೊಂದು ಲಾರಿಯನ್ನು ಹಿಂದಿಕ್ಕುವ ವೇಳೆ ಎದುರಿನಿಂದ ಬಂದ ಕಾರಿಗೆ ದಾರಿ ಬಿಟ್ಟು ಕೊಡಲು ಚಾಲಕ ಮುಂದಾದಾಗ ನಿಯಂತ್ರಣ ತಪ್ಪಿ ಲಾರಿ ಉರುಳಿಬಿತ್ತು.
ಪರಿಹಾರ ಘೋಷಣೆ: ಸಂಜೆ ಕಿಮ್ಸಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ಗಾಯಾಳುಗಳಿಗೂ ಸೂಕ್ತ ಪರಿಹಾರ ಮತ್ತು ಉಚಿತ ಚಿಕಿತ್ಸೆ ನೀಡಲಾಗುವುದು' ಎಂದು ಭರವಸೆ ನೀಡಿದರು.