ದಾವಣಗೆರೆ: ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಗಳ ಮರುಜಾರಿ ಸೇರಿದಂತೆ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ (ಐಕ್ಯತಾ), ಸಿಪಿಐ, ಎಐಟಿಯುಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಮಾನವ ಹಕ್ಕುಗಳ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಬಿ. ಕೃಷ್ಣಪ್ಪ ಮತ್ತು ಎನ್. ಮೂರ್ತಿ ಬಣ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವೃದ್ಧರು, ಅಂಗವಿಕಲರು ಮತ್ತಿ ವಿಧವೆಯರು ಪಾಲ್ಗೊಂಡಿದ್ದರು.
ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಸರ್ಕಾರ ನಿವೃತ್ತ ಅಸಂಘಟಿತ ಕಾರ್ಮಿಕರು ಮತ್ತು ರೈತರು, ಹಿರಿಯ ನಾಗರಿಕರ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಈ ಹಿಂದೆ ಪಟ್ಟಿಯಿಂದ ಕೈಬಿಡಲಾದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ಮುಂದುವರಿಸಬೇಕು. ಅಂಗವಿಕಲರು, ವಿಧವೆಯರ ಪಿಂಚಣಿಯನ್ನು ಮರುಜಾರಿಗೆ ತರಬೇಕು. ಎಂದು ಒತ್ತಾಯಿಸಿದರು.