ಶೃಂಗೇರಿ: ಗಾಂಧಿ ಮೈದಾನದಿಂದ ಕಲ್ಕಟ್ಟೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಕಾಮಗಾರಿ ಭರದಿಂದ ಸಾಗಿದೆ.
ತೂಗು ಸೇತುವೆ ನಿರ್ಮಿಸುವಲ್ಲಿ ಖ್ಯಾತಿ ಪಡೆದಿರುವ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಉಸ್ತುವಾರಿಯಲ್ಲಿ ಪಟ್ಟಣ ಪಂಚಾಯಿತಿಯು ಸೇತುವೆ ನಿರ್ಮಿಸುತ್ತಿದೆ.
ಈಗಾಗಲೇ ಕಲ್ಕಟ್ಟೆ ಪ್ರದೇಶದಲ್ಲಿ ಪಿಲ್ಲರ್ ತಲೆ ಎತ್ತಿ ನಿಂತಿದ್ದು, ಕೇವಲ ಮೂರೇ ತಿಂಗಳಲ್ಲಿ ತೂಗು ಸೇತುವೆ ನಿರ್ಮಾಣವಾಗಲಿದೆ. ಪ್ರಜಾವಾಣಿ ಜತೆ ಮಾತನಾಡಿದ ಭಾರಧ್ವಾಜ್, ಸೇತುವೆಯನ್ನು ಹೊಸ ತಾಂತ್ರಿಕ ವಿಧಾನ ಅಳವಡಿಸಿ ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ಸೇತುವೆಯ ಕಬ್ಬಿಣಕ್ಕೆ ತುಕ್ಕು ಹಿಡಿಯದಂತೆ ಗ್ಯಾಲ್ವನೈಸಿಂಗ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಈಗಾಗಲೇ ಇಂತಹ 5-6 ಸೇತುವೆ ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿ ಈ ರೀತಿಯದು ಮೊದಲನೆಯದು. ಸೇತುವೆ 118 ಮೀಟರ್ ಉದ್ದ ಇದ್ದು ಗಾಂಧಿಮೈದಾನದಲ್ಲಿ ಪ್ರತಿವರ್ಷ ಸಂಭವಿಸುವ ಪ್ರವಾಹದ ಮಟ್ಟಕ್ಕಿಂತ 10 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.
ಈಗಿನ ಮೈದಾನದ ನೆಲ ಮಟ್ಟಕ್ಕಿಂತ 14 ಅಡಿ ಏರಿಕೆ ಬರಲಿದ್ದು, ವಾಹನ ಸಂಚಾರಕ್ಕೆ ಆಸ್ಪದವಿಲ್ಲದಂತೆ ಮೆಟ್ಟಿಲು ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.