ಹಾಸನ: ಅಣ್ಣಾ ಹಜಾರೆ ಹೋರಾಟವನ್ನು ಬೆಂಬಲಿಸಿ ಹಾಗೂ ಅವರ ಬಂಧನ ವಿರೋಧಿಸಿ ನಗರದ ವಿವಿಧ ಸಂಘಟನೆಗಳು ಆರಂಭಿಸಿರುವ ಹೋರಾಟ ಬುಧವಾರವೂ ಮುಂದುವರಿದಿದೆ. ನಗರದ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಗುರುವಾರ ಅರ್ಧ ದಿನ ಹಾಸನ ಬಂದ್ಗೆ ಕರೆ ನೀಡಿದೆ.
ಇಲ್ಲಿನ ಹೇಮಾವತಿ ಪ್ರತಿಮೆ ಮುಂದೆ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸಿರುವ ವಿವಿಧ ಸಂಘಟನೆಗಳು ಅಣ್ಣಾ ಹಜಾರೆ ಹೋರಾಟಕ್ಕೆ ಜಯ ಸಿಗುವತನಕ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿವೆ.
`ಪ್ರತಿಭಟನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಗುರುವಾರ ಮುಂಜಾನೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಸನ ಬಂದ್ ಆಚರಿಸಲಾಗುವುದು. ಚಿತ್ರ ಮಂದಿರಗಳ ಮಾಲೀಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಅವಧಿಯಲ್ಲಿ ಸಾರಿಗೆ ಬಸ್ಸುಗಳನ್ನೂ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗುವುದು. ಸಂಜೆ 7ಗಂಟೆಗೆ ಹೇಮಾವತಿ ಪ್ರತಿಮೆ ಮುಂದಿನಿಂದ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಸಂಘಟನೆಯ ಮಂಜುನಾಥ ದತ್ತ ತಿಳಿಸಿದ್ದಾರೆ.
ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಬಿಜೆಪಿ ಮುಖಂಡ ಬಿ.ಬಿ. ಶಿವಪ್ಪ, ಬಾಳ್ಳು ಗೋಪಾಲ್, ಕಿಶೋರ್ ಕುಮಾರ್, ಆರ್.ಪಿ. ವೆಂಕಟೇಶಮೂರ್ತಿ, ಎಚ್.ಬಿ. ರಮೇಶ್, ಸುರೇಶ ಗುರೂಜಿ, ಶಿವಣ್ಣ, ವೈದ್ಯರಾದ ಡಾ. ಭಾರತಿ, ಡಾ. ಶಿವಪ್ರಸಾದ್, ಡಾ. ಹೇಮಲತಾ, ಮಾನವೀಯ ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಕೆ.ಟಿ. ಜಯಶ್ರೀ, ಕಟ್ಟಾಯ ಶಿವಕುಮಾರ್ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.